ಸಾಹಿತಿ ದೇಜಗೌ ಅವರು ಹಿಂದೂ ಧರ್ಮದ ಬಗ್ಗೆ ನೀಡಿರುವ ಹೇಳಿಕೆ (ಪ್ರ.ವಾ., ಆ. 31) ಡಾ. ಶಿವರಾಮ ಕಾರಂತರ ‘ಚೋಮನ ದುಡಿ’ಯಲ್ಲಿನ ಒಂದು ಸಂದರ್ಭವನ್ನು ನೆನಪಿಸುತ್ತದೆ. ಬೇಸಾಯಗಾರನಾಗಬೇಕೆಂಬ ಏಕೈಕ ಗುರಿ ಹೊಂದಿದ್ದ ಚೋಮ ತನ್ನ ಮಗ ಕ್ರೈಸ್ತ ಧರ್ಮ ಸೇರಿ ಬೇಸಾಯಗಾರನಾದ ವಿಷಯ ತಿಳಿದು, ತಾನೂ ಆ ಧರ್ಮ ಸೇರಲು ನಿರ್ಧರಿಸಿ ಹೊರಡುತ್ತಾನೆ.
ದಾರಿಯಲ್ಲಿ ಅವನು ನಂಬಿದ್ದ ಪಂಜುರ್ಲಿ ಭೂತದ ಗುಡಿಗೆ ಎಂದಿನಂತೆ ಡೊಗ್ಗಾಲು ಹಾಕದೆ ಮುಂದುವರಿಯುತ್ತಾನೆ. ಆಗ ಪಂಜುರ್ಲಿ ಭೂತ ಎದುರಿಗೆ ಬಂದು ‘ಚೋಮ, ಮೀಸೆ ಹಣ್ಣಾಗುವ ತನಕ ನನ್ನನ್ನು ನಂಬಿಬಂದು, ಈಗ ಸಾಯುವ ಮೂರು ದಿನಕ್ಕೆ ಮುಂಚೆ ನನ್ನನ್ನು ಬಿಟ್ಟು ಪಾದ್ರಿಯ ಹಿಂದೆ ಓಡುತ್ತೀಯೋ?’ ಎಂದು ಕೇಳಿದಂತಾಗುತ್ತದೆ. ಆಗ ಚೋಮ ಕಷ್ಟ, ಸುಖ ಕ್ರೈಸ್ತರಿಗೂ ತಪ್ಪಿದ್ದುಂಟೆ ಎಂದುಕೊಂಡು ಗುಡಿಸಿಲಿಗೆ ಹಿಂದಿರುಗುತ್ತಾನೆ.
ಕ್ರೈಸ್ತ ಧರ್ಮದವರು ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಖಂಡಿತವಾಗಿಯೂ ಶ್ಲಾಘನೀಯ, ಅದನ್ನು ಮೆಚ್ಚಲಿ. ಆದರೆ ಭಾರತದ ನಾಗರಿಕತೆ ಬಹಳ ಹಿಂದಿನಿಂದಲೂ ಸರ್ವಧರ್ಮಗಳನ್ನೂ ಗೌರವಿಸಿಕೊಂಡು, ತಾನೂ ಬೆಳೆದು ಇತರ ಧರ್ಮಗಳನ್ನೂ ಬೆಳೆಸಿದೆ. ಇದರ ಅರಿವಿರುವ ಪ್ರಬುದ್ಧ ದೇಜಗೌ ತಮ್ಮ ಹೇಳಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.