ADVERTISEMENT

ಜನರನ್ನು ಎತ್ತಿ ಕಟ್ಟುವ ಷಡ್ಯಂತ್ರ ಬೇಡ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 16:10 IST
Last Updated 2 ಫೆಬ್ರುವರಿ 2011, 16:10 IST

‘ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ತಮ್ಮ ವಿರುದ್ಧ ಆ ಪಕ್ಷದ ನಾಯಕರು ಮಾಡಿದ ಕಟು ಟೀಕೆಗಳಿಗೆ ಜನರಿಂದ ಪ್ರತಿಕ್ರಿಯೆ ಬರುವುದಾಗಿ ನಿರೀಕ್ಷಿಸಿದ್ದೆ.ಆದರೆ ಜನರಾರೂ ಪ್ರತಿಕ್ರಿಯಿಸದೇ ಸುಮ್ಮನಿರುವುದು ತಮಗೆ ಬೇಸರ ತಂದಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇತ್ತೀಚೆಗೆ ಅವಲತ್ತುಕೊಂಡಿರುವುದು ವಿಚಿತ್ರ.

ಇದು ಮುಖ್ಯಮಂತ್ರಿ ಅವರ ಅಸಹಾಯಕತೆ ಎನ್ನುವುದಕ್ಕಿಂತ ಅವರು, ತಮ್ಮ ಬಗೆಗೆ ಬರುವ ಟೀಕೆಗಳಿಗೆ ಜನರು ವಿಶೇಷವಾಗಿ ಲಿಂಗಾಯತರು ಪ್ರತಿಭಟನೆ ಮೂಲಕ ಉತ್ತರ ಕೊಡಲಿ ಎನ್ನುವ ನಿರೀಕ್ಷೆ ಇರಬಹುದು. ಇದು ಜನರನ್ನು ತಮ್ಮ ವಿರೋಧಿಗಳ ವಿರುದ್ಧ ಎತ್ತಿಕಟ್ಟುವ ಕುತಂತ್ರವಲ್ಲದೇ ಬೇರೇನೂ ಅಲ್ಲ. ಇದಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುವ ಬೆದರಿಕೆ ಬೇರೆ! ಇದು ಮುಖ್ಯಮಂತ್ರಿಗೆ ಶೋಭೆ ತರುವಂತಹದ್ದಲ್ಲ.

ಮಠಗಳಿಗೆ ಕೋಟಿಗಟ್ಟಲೆ ಜನರ ತೆರಿಗೆ ಹಣವನ್ನು ಕೊಟ್ಟು ಮಠಾಧೀಶರನ್ನು ತಮ್ಮ ಬೆನ್ನಿಗಿಟ್ಟುಕೊಂಡಿರುವ ಮುಖ್ಯಮಂತ್ರಿಗಳು ಜನರನ್ನು ಎತ್ತಿಕಟ್ಟು ರಾಜಕೀಯ ಷಡ್ಯಂತ್ರವನ್ನು ಬಿಟ್ಟು   ವಿಧಾನ ಸೌಧದಲ್ಲಿ ಕುಳಿತು ಪ್ರಾಮಾಣಿಕ ಆಡ ಳಿತ ನಡೆಸುವ ಬಗೆಗೆ ಯೋಚಿಸಿದರೆ ಅವರಿಗೂ ಮತ್ತು ರಾಜ್ಯಕ್ಕೂ ಒಳ್ಳೆಯದು.

ಭ್ರಷ್ಟಾಚಾರ ಮತ್ತು ಕೆಟ್ಟದ್ದಕ್ಕೆಲ್ಲ ಹಿಂದಿನವರನ್ನು ಉದಾಹರಣೆ ಕೊಟ್ಟು ತಮ್ಮನ್ನು ಸಮರ್ಥಿಸಿಕೊಳ್ಳುವ ಯಡಿಯೂರಪ್ಪನವರಿಗೆ ಹಿಂದಿನವರ ಪ್ರಾಮಾಣಿಕತೆ ಮತ್ತು ದಕ್ಷ ಆಡಳಿತ  ನೆನಪಿಗೆ ಬರುವುದಿಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.