ADVERTISEMENT

ಜಾತಿ ಸಮಾವೇಶಗಳು ಅಗತ್ಯವೇ?

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST

ನಮ್ಮದು ಜಾತ್ಯತೀತ ರಾಷ್ಟ್ರ. ಹಾಗೆಂದು ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಆದರೆ ವಾಸ್ತವವಾಗಿ ಆಗುತ್ತಿರುವುದೇನು? ಸಣ್ಣಪುಟ್ಟ ಜಾತಿಗಳಿಂದ ಹಿಡಿದು ಹೆಚ್ಚಿನ ಜನಸಂಖ್ಯೆ ಇರುವ ಜಾತಿಗಳವರೆಗೆ ಎಲ್ಲರೂ  ಜಾತಿ ವೈಭವೀಕರಣಕ್ಕೆ ಮುಂದಾಗಿದ್ದಾರೆ. ಜಾತಿ ವೈಯಕ್ತಿಕವಾಗಿ ಮತ್ತು ಕುಟುಂಬಕ್ಕೆ ಸೀಮಿತವಾಗಿದ್ದರೆ ಅದರಿಂದ ಸಮಾಜಕ್ಕೆ ಹಾನಿ ಇಲ್ಲ.

ಆದರೆ ಬಹಿರಂಗವಾಗಿ ಜಾತಿ ಸಂಘಟನೆಗೆ ತೊಡಗಿ ಬೃಹತ್ ಸಮಾವೇಶ ನಡೆಸುವುದು, ತಮ್ಮ ಜಾತಿಯ ರಾಜಕಾರಣಿಗಳಿಗೆ ಕುಮ್ಮಕ್ಕು ಕೊಡುವುದು, ಮಾಧ್ಯಮಗಳು ಪ್ರತಿಯೊಬ್ಬರನ್ನೂ ಜಾತಿ ಹೆಸರಿಂದ ಗುರುತಿಸುವದು -ಇತ್ಯಾದಿ ಚಟುವಟಿಕೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿವೆ.

ಪ್ರತಿಯೊಂದು ಘಟನೆಯನ್ನೂ ಜಾತಿಯ ಹಿನ್ನೆಲೆಯಲ್ಲಿ ನೋಡುವ ಮನಸ್ಥಿತಿಯನ್ನು ಜನರು ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ. ಜಾತಿ ಘರ್ಷಣೆಗಳು ಹೆಚ್ಚುತ್ತಿವೆ. ಸಹಜೀವನ ದೂರವಾಗುತ್ತಿದೆ. ಈ ಎಲ್ಲ ನಡವಳಿಕೆಗಳು ಸಂವಿಧಾನಕ್ಕೆ ಅಪಚಾರ ಎಸಗಿದಂತೆ. ಇತ್ತೀಚಿನ ಸರ್ಕಾರಗಳೂ ಜಾತಿ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತಿವೆ.

ನಮ್ಮ ದೇಶದಲ್ಲಿ ಜಾತಿ ಸಮಾವೇಶಗಳನ್ನು ನಡೆಸದಂತೆ, ಮಾಧ್ಯಮಗಳಲ್ಲಿ ಜಾತಿ ಹೆಸರು ಬಳಸದಂತೆ ನಿರ್ಬಂಧ ಹೇರುವ ಕಾರ್ಯವನ್ನು ಪ್ರಜ್ಞಾವಂತರು ಅಥವಾ ಸಂಘಟನೆಗಳು ಮಾಡಬೇಕಿದೆ. ಈ ಕುರಿತು ಹೆಚ್ಚಿನ ಚರ್ಚೆಯಾಗಬೇಕು ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.