ವಿರೋಧ ಪಕ್ಷಗಳ ನಾಯಕರಿಂದ ತಮಗೆ ಜೀವಭಯ ಇದೆ, ವಾಮಾಚಾರದ ಮೂಲಕ ತಮ್ಮನ್ನು ಮುಗಿಸಲು ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಬೊಬ್ಬಿರಿಯುತ್ತಾರೆ. ಆಹಾರ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮತ್ತು ವೈದ್ಯಕೀಯ ಸಚಿವ ರಾಮದಾಸ್, ತಮಗೆ ಬೆದರಿಕೆಯ ಕರೆಗಳು ಬರುತ್ತಿವೆ, ಜೀವ ಭಯ ಇದೆ ಎಂದು ಹೇಳುತ್ತಾರೆ.
ಗೃಹ ಸಚಿವ ಅಶೋಕ್, ರಾಜ್ಯದ ಶೇ. 90ರಷ್ಟು ಶಾಸಕರಿಗೆ ಜೀವಭಯ ಇದೆ, ಎಲ್ಲರಿಗೂ ಗನ್ಮ್ಯಾನ್ ಒದಗಿಸಲಾಗಿದೆ ಎಂದು ಹೇಳುತ್ತಾರೆ. ಈ ಹೇಳಿಕೆಗಳನ್ನು ನೋಡುತ್ತಿದ್ದರೆ ನಾವು, ಕರ್ನಾಟಕದ ಆರು ಕೋಟಿ ಜನತೆ ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೇವೆಯೋ, ಜಂಗಲ್ರಾಜ್ನಲ್ಲಿ ಇದ್ದೇವೋ ಎಂದು ಅನುಮಾನ ಮೂಡುತ್ತಿದೆ. ಪ್ರಜೆಗಳಿಂದಲೇ ಚುನಾಯಿತರಾದ ಪ್ರತಿನಿಧಿಗಳ ಸಾರಥ್ಯದಲ್ಲಿ ನಡೆಸಲಾಗುವ ಸರ್ಕಾರದ ಮೂಲಭೂತ ಕರ್ತವ್ಯವೆಂದರೆ ಪ್ರಜೆಗಳ ಜೀವ, ಆಸ್ತಿ, ಮಾನ, ಘನತೆ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಕಾಪಾಡುವುದು. ಈ ಕಾರಣಕ್ಕಾಗಿಯೇ ನ್ಯಾಯಾಂಗ, ಕಾರ್ಯಾಂಗಗಳನ್ನೂ ಸೃಷ್ಟಿಸಲಾಗಿದೆ. ಕಾನೂನು ಪಾಲನೆಗಾಗಿ ಪೊಲೀಸ್ ವ್ಯವಸ್ಥೆಯನ್ನೂ ರೂಪಿಸಲಾಗಿದೆ.
ಆದರೆ ರಾಜ್ಯದ ಶೇ. 90ರಷ್ಟು ಶಾಸಕರಿಗೇ ಜೀವಭಯ ಇದೆ ಎಂದು ಹೇಳಿರುವ ಗೃಹ ಸಚಿವರು, ಯಾರಿಂದ ಜೀವಭಯ ಇದೆ ಎಂದು ಬಹಿರಂಗಪಡಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.