ಜ್ಞಾನಪೀಠ ಪ್ರಶಸ್ತಿ ವಿಜೇತರ ಫೋಟೊಗಳಷ್ಟೇ ರಾಜ್ಯದ ಬಹುತೇಕ ಶಾಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಘಟಕಗಳಲ್ಲಿ ರಾರಾಜಿಸುತ್ತಿರುವ ಔಚಿತ್ಯವನ್ನು ವಿಜಯಕಾಂತ ಪಾಟೀಲ ಅವರು ವಾಚಕರವಾಣಿಯಲ್ಲಿ (ನ.27) ಪ್ರಶ್ನಿಸಿರುವುದು ಸರಿಯಾಗಿದೆ. ಸರಸ್ವತಿ ಸಮ್ಮಾನ್, ಮ್ಯಾಗ್ಸೆಸೆ ಪ್ರಶಸ್ತಿಗಳು ಅದಕ್ಕೆ ಸರಿಸಮಾನವಾದರೂ ಅವನ್ನು ತಾತ್ಸಾರ ಮಾಡಲಾಗುತ್ತಿದೆ ಎಂದು ವಿಜಯ ರಾಘವ ಅವರು ಈ ವಾದ ಸರಣಿಯನ್ನು ಮುಂದುವರಿಸಿ ದ್ದಾರೆ. ಇವರಿಬ್ಬರೂ ಎತ್ತಿರುವ ಪ್ರಶ್ನೆಗಳು ಔಚಿತ್ಯಪೂರ್ಣವಾಗಿವೆ.
ಕನ್ನಡ ಸಾಹಿತ್ಯ ಪರಿಷತ್ ಸಂಘಟಿಸುವ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಸ್ಥಾನವೂ ಅಷ್ಟೇ ಮಹತ್ವದ್ದು. ಜಿ.ವೆಂಕಟಸುಬ್ಬಯ್ಯ ಅವರಂತಹ ಭಾಷಾ ತಜ್ಞ, ಎಲ್.ಬಸವರಾಜು ಅವರಂತಹ ವಿದ್ವಾಂಸ, ಗೀತಾ ನಾಗಭೂಷಣ ಅವರಂತಹ ಮಹತ್ವದ ಕಥೆಗಾರ್ತಿಯರು ಸಮ್ಮೇಳನಾಧ್ಯಕ್ಷರಾಗಿದ್ದಾರೆ. ವಿಪರ್ಯಾಸವೆಂದರೆ ಕಸಾಪ ಇವರನ್ನು ಮೆರೆಸುವುದಿಲ್ಲ, ಬದಲಾಗಿ ಜ್ಞಾನಪೀಠ ಪ್ರಶಸ್ತಿ ಪಡೆದವರನ್ನು ಹೊತ್ತುಕೊಂಡು ಕುಣಿದಾಡುತ್ತದೆ! ಇದುವರೆಗಿನ ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ಕನ್ನಡದ ಅನರ್ಘ್ಯ ರತ್ನಗಳೇ.
ಡಿವಿಜಿ, ಭೈರಪ್ಪ, ಲಂಕೇಶ್, ತೇಜಸ್ವಿ, ಕಣವಿ ಮುಂತಾದವರಿಗೆ ಜ್ಞಾನ ಪೀಠ ಬಂದಿಲ್ಲ ಎಂದರೆ ಅವರ ಕೊಡುಗೆ ಜ್ಞಾನಪೀಠ ಪಡೆದವರಿಗಿಂತ ಕಡಿಮೆಯದಲ್ಲ. ಹಾಗಾಗಿ ಜ್ಞಾನಪೀಠ ಪ್ರಶಸ್ತಿ ಬಂದವರಷ್ಟನ್ನೇ ಬಿಂಬಿಸಿದರೆ ಅದು ಕನ್ನಡ ಸಾಹಿತ್ಯಲೋಕದ ಪ್ರಾತಿನಿಧಿಕ ಸ್ವರೂಪ ಆಗುವುದಿಲ್ಲ. ಶಾಲೆ, ಕಾಲೇಜು, ಪರಿಷತ್ ಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಸ್ಮರಣೆ ಯನ್ನೂ ನಿರಂತರ ಮಾಡಿಕೊಳ್ಳುವಂತಾಗಲಿ. ಸಂಗೀತ, ಚಿತ್ರಕಲೆ, ನಾಟಕ, ನೃತ್ಯದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಹೆಸರು ಮಾಡಿದವರಿದ್ದಾರೆ. ಅವರ ನೆನಪೂ ಬೇಡವೆ?
–ಜಿ.ಎನ್.ನಿಶಾಂತ, ಬೆಂಗಳೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.