ADVERTISEMENT

ತಪ್ಪನ್ನು ಸರಿಪಡಿಸಲಿ

ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ಸರ್ಕಾರವು ಪ್ರತಿವರ್ಷ ಮಾ. 21ರಂದು ‘ದೇವರ ದಾಸಿಮಯ್ಯ’ನ ಹೆಸರಿನಲ್ಲಿ ಜಯಂತಿಯನ್ನು ಆಚರಿಸುತ್ತಾ ಬಂದಿದೆ. ವಾಸ್ತವದಲ್ಲಿ ಜಯಂತಿ ಆಚರಿಸಬೇಕಾದುದು ‘ಜೇಡರ ದಾಸಿಮಯ್ಯ’ನವರ ಹೆಸರಿನಲ್ಲಿ.

ಕನ್ನಡ ಸಾಹಿತ್ಯದಲ್ಲಿ ಇಬ್ಬರು ದಾಸಿಮಯ್ಯರು ಆಗಿ ಹೋಗಿದ್ದಾರೆ. ಕಲ್ಯಾಣ ಚಾಲುಕ್ಯರ ರಾಣಿ ದುಗ್ಗಲಾದೇವಿಗೆ ಲಿಂಗದೀಕ್ಷೆ ನೀಡಿದ ಗುರು ದೇವರ ದಾಸಿಮಯ್ಯ (ಕ್ರಿ.ಶ. 1040) ಮತ್ತು ಆದ್ಯ ವಚನಕಾರನೆಂಬ ಹೆಗ್ಗಳಿಕೆಗೆ ಪಾತ್ರರಾದವರು ಜೇಡರ ದಾಸಿಮಯ್ಯ (ಕ್ರಿ.ಶ. 1080). ಇವರಿಬ್ಬರೂ ಭಿನ್ನ ಕಾಲದಲ್ಲಿ ಬದುಕಿದವರು. ‘ಬಸವಪೂರ್ವ ವಚನಕಾರರೆಂದು ಖ್ಯಾತರಾದವರು ಹಾಗೂ ವಚನಗಳನ್ನು ರಚಿಸಿದವರು ಜೇಡರ ದಾಸಿಮಯ್ಯ’ ಎಂದು ಡಾ. ಎಂ. ಚಿದಾನಂದಮೂರ್ತಿ ಆದಿಯಾಗಿ ವಿದ್ವಾಂಸರು ಆಧಾರಪೂರ್ವಕ ಸಾರಿ ಹೇಳಿದ್ದಾರೆ.

‘ಆದ್ಯರ ವಚನ ಪರುಷ ಕಂಡಯ್ಯ’ ಎಂದು ಬಸವಣ್ಣ ಕೊಂಡಾಡಿದ್ದು ಜೇಡರ ದಾಸಿಮಯ್ಯನವರನ್ನು ಕುರಿತು. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿಯ ಗಬ್ಬೂರಿನ ಶಾಸನವೊಂದರಲ್ಲಿ ಜೇಡರ ದಾಸಿಮಯ್ಯನವರ ಹೆಸರು ಉಲ್ಲೇಖವಾಗಿದೆ. ದೇವರ ದಾಸಿಮಯ್ಯ ವಚನಗಳನ್ನು ರಚಿಸಿರುವುದಿಲ್ಲ.

ADVERTISEMENT

ಸರ್ಕಾರ, ಹಿಂದಿನ ತಪ್ಪನ್ನು ತಿದ್ದಿಕೊಂಡು, ಈ ಬಾರಿ ‘ಜೇಡರ ದಾಸಿಮಯ್ಯ’ನ ಹೆಸರಲ್ಲಿಯೇ ಜಯಂತಿಯನ್ನು ಆಚರಿಸಬೇಕು. ಆ ಮೂಲಕ ಜೇಡರ– ಜಾಡರ (ನೇಕಾರ) ಸಮುದಾಯದಲ್ಲಿ ಆತ್ಮಾಭಿಮಾನ ತುಂಬಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.