ADVERTISEMENT

ನಿಜವಾದ ಕಾಳಜಿ ಇರಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST

ಸಾಲ ಮನ್ನಾ ಮಾಡಿದಾಕ್ಷಣ ರೈತರ ಸಂಕಷ್ಟಗಳೆಲ್ಲಾ ಮುಗಿಯುವುದಿಲ್ಲ (ಈ ವಿಚಾರವಾಗಿ ಎಂ.ಎಸ್. ಶ್ರೀರಾಮ್ ಅವರು ಸವಿಸ್ತಾರವಾಗಿ ‘ಪ್ರಜಾ ಮತ’ ‍ಪುಟದಲ್ಲಿ ವಿವರಿಸಿದ್ದಾರೆ).

ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಿ, ರೈತರಿಗೆ ಸಕಾಲದಲ್ಲಿ, ರಿಯಾಯಿತಿ ದರದಲ್ಲಿ ಉತ್ತಮ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ನೀಡುವುದರ ಜೊತೆಗೆ ನಿಯಮಿತವಾಗಿ ನೀರು ಹಾಗೂ ವಿದ್ಯುತ್ತನ್ನು ಪೂರೈಸಬೇಕು. ಕಾಲಕಾಲಕ್ಕೆ ಕೃಷಿ ವಿಜ್ಞಾನಿಗಳಿಂದ ಸಲಹೆ ಸೂಚನೆ ಕೊಡಿಸುವ ವ್ಯವಸ್ಥೆ ಮಾಡಬೇಕು.

ರೈತರು ಬೆಳೆದಬೆಳೆಗೆ ಕಡ್ಡಾಯ ವಿಮೆ ಮಾಡಿಸಬೇಕು. ಉತ್ಪನ್ನಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಮಿಶ್ರ ಬೆಳೆ ಬೆಳೆಯುವಂತೆ ರೈತರನ್ನು ಪ್ರೇರೇಪಿಸುವುದರ ಜೊತೆಗೆ ಒಳ್ಳೆಯ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಅವರಿಗೆ ಆರು ತಿಂಗಳಿಗೆ ಬಡ್ಡಿ ರಹಿತ ಸಾಲ ನೀಡಿದರೆ ಸಾಕು ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಲ್ಲರು. ಇದರಿಂದ ರೈತರು ಸಾಲ ಮನ್ನಾದಂತಹ ಪ್ರಹಸನಕ್ಕೆ ಬಲಿಪಶುವಾಗುವುದರ ಬದಲು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬಹುದು.

ADVERTISEMENT

‘ಸಾಲ ಮನ್ನಾ ಆಗುತ್ತದೆ, ಮರುಪಾವತಿ ಮಾಡಬೇಡಿ’ ಎಂದು ಹೇಳಿದರೂ ಕೊಪ್ಪಳದ 81 ವರ್ಷದ ನಿಂಗಮ್ಮ ಎಂಬ ಮಹಿಳೆಯು ತಾನು ಪಡೆದ ಬೆಳೆ ಸಾಲವನ್ನು ಅವಧಿಗೆ ಮುನ್ನವೇ ತೀರಿಸಿದ್ದು ನಾಲ್ಕು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ‘ನಾನು ಮಾಡಿದ ಸಾಲ ನಾನೇ ಕಟ್ಟುವುದು ನಿಜವಾದ ಧರ್ಮ’ ಎಂದು ಇತರರ ಬಾಯಿ ಮುಚ್ಚಿಸಿದ ಸ್ವಾಭಿಮಾನಿ ಅಜ್ಜಿ ಅವರು. ಇಂದಿನ ಸಂದರ್ಭದಲ್ಲಿ ಅವರನ್ನು ನೆನೆಯಲೇಬೇಕು.

-ರತ್ನಶ್ರೀ ಶ್ರೀಧರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.