ಚುನಾವಣಾ ನೀತಿ ಸಂಹಿತೆ ಪಾಲನೆಯ ನೆಪದಲ್ಲಿ, ಸಾವಿರಾರು ಜನರಿಗೆ ಏರ್ಪಡಿಸಿದ್ದ ಔತಣದೂಟವನ್ನು ಮುಟ್ಟುಗೋಲು ಹಾಕಿರುವ ಚುನಾವಣಾ ಆಯೋಗದ ಕ್ಷಿಪ್ರ ಕಾರ್ಯಪಡೆಯ ಕ್ರಮ (ಪ್ರ.ವಾ., ಮಾರ್ಚ್ 28) ಬಾಲಿಶವಾಗಿದೆ.
ಈ ಔತಣಕೂಟವನ್ನು ಏರ್ಪಡಿಸಿದ್ದು ರಾಜಕೀಯ ಮುಖಂಡ ಮತ್ತು ಸರ್ಕಾರಿ ಸ್ವಾಮ್ಯದ ಮಂಡಳಿಯೊಂದರ ಮುಖ್ಯಸ್ಥರು. ಇವರು ಚುನಾವಣಾ ನೀತಿಸಂಹಿತೆಯ ವ್ಯಾಪ್ತಿಗೆ ಬರುವವರೇ. ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಔತಣ ಕೂಟವನ್ನು ಏರ್ಪಡಿಸಿದ್ದು ಕಾನೂನಿನ ದೃಷ್ಟಿಯಲ್ಲಿ ತಪ್ಪು. ಆದರೆ ನೀತಿ ಸಂಹಿತೆ ಜಾರಿ ಮಾಡುವವರು ಸಂದರ್ಭ–ಸನ್ನಿವೇಶ, ಸತ್ಯಗಳನ್ನು ಪರಿಗಣಿಸುವ ವಿವೇಕವನ್ನು ತೋರಿಸಬಾರದೇ?
ಸಾವಿರಾರು ಜನಕ್ಕೆ ಮಾಂಸದಡುಗೆ ಮಾಡಿಸುತ್ತಿದ್ದಾಗ ಅಧಿಕೃತವಾಗಿ ಚುನಾವಣಾ ದಿನಾಂಕ ಘೋಷಣೆಯಾಗಿರಲಿಲ್ಲ. ಅದು ಘೋಷಣೆಯಾದದ್ದು ಊಟ ಇಕ್ಕುವ ವೇಳೆಯಲ್ಲಿ! ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ನಲ್ಲಿ ತಕ್ಷಣ ಪ್ರತ್ಯಕ್ಷರಾದರು. ಊಟಕ್ಕೆ ಕೂತಿದ್ದವರನ್ನು ಹೊರದಬ್ಬಿ ಲಕ್ಷಾಂತರ ರೂಪಾಯಿ ವೆಚ್ಚದ ಊಟವನ್ನು ಮುಟ್ಟುಗೋಲು ಹಾಕಿಕೊಂಡರು! ರಾಜಕೀಯ ಮುಖಂಡರೊಬ್ಬರ ಹುಟ್ಟುಹಬ್ಬದ ಔತಣವನ್ನೂ ಇನ್ನೊಂದು ಕಡೆ ಅಧಿಕಾರಿಗಳು ಇಷ್ಟೇ ದಕ್ಷವಾಗಿ ಮಣ್ಣು ಮಾಡಿದರಂತೆ!
ಈಗೊಂದು ಅನುಮಾನ, ಚುನಾವಣೆ ಹೆಸರಿನ ಈ ನೀತಿ ಸಂಹಿತೆಗೂ, ಧರ್ಮಶಾಸ್ತ್ರಗಳಲ್ಲಿ ವಿಧಿಸಿರುವ ಕಂದಾಚಾರ ಸಂಹಿತೆಗೂ ಯಾವ ರೀತಿಯಲ್ಲಾದರೂ ವ್ಯತ್ಯಾಸವಿದೆಯೇ?
– ಆರ್. ಕೆ. ದಿವಾಕರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.