ADVERTISEMENT

ನೈಪಾಲರ ಅಪ್ರಬುದ್ಧ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಲೇಖಕ ವಿ.ಎಸ್. ನೈಪಾಲರು ರಾಯಲ್ ಜಿಯಾಗ್ರಫಿಕ್ ಸೊಸೈಟಿಗೆ ನೀಡಿದ ಸಂದರ್ಶನದ ವಿವರವನ್ನು ಪತ್ರಿಕೆಗಳಲ್ಲಿ ಓದಿದೆ.ಅವರು ತಮ್ಮ ಸರಿಸಮಾನರಾದ ಯಾವ ಲೇಖಕಿಯೂ ಜಗತ್ತಿನಲ್ಲಿ ಇಲ್ಲವೆಂದು ಹೇಳಿದ್ದಾರೆ.

ಅನೇಕರಿಗೆ ತಾವೇ ಪರಮಶ್ರೇಷ್ಠವೆಂಬ ಭಾವನೆ ಇರುತ್ತದೆ. ನೈಪಾಲರೂ ಇದಕ್ಕೆ ಹೊರತಲ್ಲ. ಅದರಿಂದ ಈ ಹೇಳಿಕೆ ಕುರಿತು ನನ್ನ ತಕರಾರು ಇಲ್ಲ.ಆದರೆ ನೈಪಾಲರು `ಸಮಾನರಾರಿಹರೈ~ ಎಂಬ ಲಹರಿಯಿಂದ ಮುಂದುವರಿದು ತೂಕ ತಪ್ಪಿ ಎಡವಿದ್ದಾರೆ:

`ಮಹಿಳೆಯರ ಆಲೋಚನೆ, ಭಾವನೆ, ಮತ್ತು ದೃಷ್ಟಿಕೋನ ತೀರಾ ಸಂಕುಚಿತವಾದುದು.ಅವರು ಮನೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದೆ ಬರವಣಿಗೆಗೆ ಇಳಿಯುತ್ತಾರೆ~ ಎಂದು ಬಹಳ ಹಗುರವಾಗಿ ಮಾತಾಡಿದ್ದಾರೆ.ತಾತ್ಸಾರದಿಂದ ಕೂಡಿದ ಈ ಬಾಲಿಶ ಹೇಳಿಕೆ ಅಪಾಯಕಾರಿ. ಅವರ ಈ ಉಡಾಫೆಯ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಮಹಿಳೆಯ ಬದುಕು ಮನೆಯನ್ನು ನೋಡಿಕೊಳ್ಳುವುದಕ್ಕೆ ಸೀಮಿತವೆಂಬುದು ಅವರ ಮಾತಿನ ಸಾರಾಂಶ. ಮನೆಯನ್ನು ಸರಿಯಾಗಿ ಸಂಬಾಳಿಸಿಕೊಳ್ಳಲು ಆಗದ ಮಹಿಳೆಯರು ಲೇಖಣಿ ಹಿಡಿಯುತ್ತಾರೆ ಎಂಬ ಅವರ ಗ್ರಹಿಕೆ ಆಪಾತತಹ ಸಂಕುಚಿತವಾದದ್ದು. ಈ ನಿಲುವು ಅಮಾನವೀಯವಾದದ್ದು.

ಪುರುಷನಿಗಷ್ಟೇ ಸಾಹಿತ್ಯ ಕ್ಷೇತ್ರ ಮೀಸಲು ಎಂಬ ಹಮ್ಮು ಬಿಮ್ಮು ನೈಪಾಲರ ಮಾತುಗಳಲ್ಲಿ ಹೊಮ್ಮಿದೆ, ಜಗತ್ತಿನ ಎಲ್ಲ ಭಾಷೆಗಳ ಲೇಖಕಿಯರ ಸಾಹಿತ್ಯ ಸೃಷ್ಟಿಯನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರಂತೆ ಸಾಧಾರಣೀಕರಿಸಿ, ಸಾರಾಸಗಟಾಗಿ `ಲೇಖಕಿಯರ ಬರೆಹ ಜಳ್ಳು~ ಎಂದು ಗುಡಿಸಿ ಹಾಕಿರುವುದು ನೈಪಾಲರು ಪೂರ್ವಗ್ರಹ ಪೀಡಿತರೆಂಬುದನ್ನು ಸಾಬೀತುಪಡಿಸುತ್ತದೆ.
 
ನೊಬೆಲ್ ಪ್ರಶಸ್ತಿ ಪುರಸ್ಕಾರ ಪಡೆದವರು ಕೂಡ ಎಲ್ಲ ಬಲ್ಲವರಲ್ಲ ಮತ್ತು ಪೂರ್ವಗ್ರಹ ಮೊದಲಾದ ಮಿತಿಗಳನ್ನು ಗೆದ್ದವರಲ್ಲ ಎಂಬುದನ್ನು ನೈಪಾಲರು ತಮ್ಮ ಹೇಳಿಕೆಯಿಂದ ದೃಢೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.