ಡಾ. ವಿ.ಕೆ. ಬಹುಗುಣ ನೇತೃತ್ವದ ಸಮಿತಿ (ಐ.ಪಿ.ಎಫ್.ಆರ್.ಇ.) ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಗತ್ಯವಿರ್ದುವಷ್ಟು ಅದಿರು ತೆಗೆಯಲು ಶಿಫಾರಸು ಮಾಡಿದೆ.
ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿಯವರ ನೇತೃತ್ವದ ಸಮಿತಿ ಮಾಡಿರುವ ಶಿಫಾರಸಿನಂತೆ ಈ ಸಮಿತಿಯೂ ಪಶ್ಚಿಮಘಟ್ಟದಲ್ಲಿ ಲಭ್ಯವಿರುವ ಅದಿರನ್ನು `ನೆಲದಾಳದ ತಂತ್ರಜ್ಞಾನ ಬಳಸಿ ಅತ್ಯಾಧುನಿಕ ವಿಧಾನದಲ್ಲಿ~ ಹೊರತೆಗೆಯಲು ಚಿಂತಿಸಬೇಕು ಎಂದೂ ಹೇಳಿದೆ (ಪ್ರ.ವಾ. ಜ. 9).
ಈ ಶಿಫಾರಸು `ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ~ ಎಂಬ ಗಾದೆ ಮಾತು ನೆನಪಿಸುತ್ತದೆ. ಪಶ್ಚಿಮಘಟ್ಟ ಪ್ರದೇಶ ಅನೇಕ ಅಪರೂಪದ ಜೀವ ಹಾಗೂ ಸಸ್ಯ ಸಂಕುಲಗಳಿಂದ ಕೂಡಿದ ಜಗತ್ತಿನ ಜೀವ ವೈವಿಧ್ಯದ ತಾಣಗಳಲ್ಲಿ ಒಂದಾಗಿದೆ. ಇಂತಹ ತಾಣದಲ್ಲಿ ಪ್ರಕೃತಿಗೆ ಹಾನಿಯಾಗುವ ಯಾವ ಚಟುವಟಿಕೆಯನ್ನೂ ನಡೆಸಬಾರದು ಎಂದು ಡಾ. ಎಮ್. ಗಾಡ್ಗೀಳ್ ಸಮಿತಿ ಶಿಫಾರಸು ಮಾಡಿದೆ ಹಾಗೂ ಸುಪ್ರೀಂಕೋರ್ಟ್ 2005 ರಲ್ಲಿಯೇ ಕುದುರೆಮುಖ ಗಣಿಗಾರಿಕೆ ಸ್ಥಗಿತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ತಂತ್ರಜ್ಞಾನ ಬಳಸಿ ಪುನಃ ಗಣಿಗಾರಿಕೆ ನಡೆಸಿದರೂ ಪಶ್ಚಿಮಘಟ್ಟ ಅರಣ್ಯಕ್ಕೆ ಹಾನಿ ತಪ್ಪದು. ಅಲ್ಲಿ ಯಥಾಸ್ಥಿತಿ ಪ್ರಕೃತಿಯನ್ನು ಸಂರಕ್ಷಿಸುವುದೇ ಅಭಿವೃದ್ಧಿ ಎಂಬುದನ್ನು ನಾವು ಮನಗಾಣಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.