ADVERTISEMENT

ಪಿಟೀಲಿನಲ್ಲಿ ಹೊರಟ ಅಪಸ್ವರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕನ್ನಡಿಗರು ಅವರನ್ನು ಮುಕ್ತಮನದಿಂದ ಅಭಿನಂದಿಸಿದ್ದಾರೆ. ಕೆಲವು ವಿದ್ವಾಂಸರು ತಮ್ಮ ಮತ್ಸರವನ್ನು ಮುಚ್ಚಿಟ್ಟು ಅಭಿನಂದಿಸಿ ಹಿರಿತನವನ್ನು ಮೆರೆದಿದ್ದಾರೆ.

ಆದರೆ `ನಾಡೋಜ~, `ಪತ್ರಿಕಾರಂಗದ ಭೀಷ್ಮ~ ಎಂಬ ಬಿರುದಾಂಕಿತರಾದ ಪಾಟೀಲ್ ಪುಟ್ಟಪ್ಪ ಅವರು ಕಂಬಾರರನ್ನು ಪ್ರೀತಿಯಿಂದ ಹರಸುವದನ್ನು ಮರೆತು ತಮ್ಮ ಪಿಟೀಲಿನಲ್ಲಿ ಅಪಸ್ವರವನ್ನು ಹೊರಡಿಸಿದ್ದಾರೆ.
 
ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಹಕ್ಕೊತ್ತಾಯಕ್ಕೆ ಕಟಿಬದ್ಧರಂತೆ ತೋರಿಸಿಕೊಳ್ಳುತ್ತಿದ್ದ ಪಾಪು ಮೈಸೂರು ಕರ್ನಾಟಕದ ಬಲಪಂಥೀಯ ಬರಹಗಾರ ಭೈರಪ್ಪ ಅವರ ಬೈರಿಗೆಗೆ ಎಂದು ಒಳಗಾದರೋ? ಪಾಪು ಅವರಿಗೆ ಸೃಜನಶೀಲ ಬರವಣಿಗೆಯ ಕುರಿತು ಧ್ಯಾನ ಕಡಿಮೆ.

ಇತ್ತೀಚೆಗೆ ಅವರು ಭೈರಪ್ಪನವರ `ಆವರಣ~ದಂಥ ಕಾದಂಬರಿಯ ರಾಮರಸವನ್ನು ಕುಡಿಯತೊಡಗಿದಂತಿದೆ. ನುಡಿಯ ಕುಲುಮೆಯಲ್ಲಿ ಬಂಗಾರದಂಥ ಬರಹಗಳನ್ನು ಟಂಕಿಸಿದ ಬರಹಲೋಕದ ಕಮ್ಮಾರ ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಬಂದ ಸಂತಸದಲ್ಲಿ ನಾಡು  ಸಂಭ್ರಮಿಸುತ್ತಿರುವಾಗ ಹಿರಿತನಕ್ಕೆ ಹೆಸರಾದ ಪಾಪು ಹದಿಹರೆಯದವರಂತೆ ಹೀಗೆ ಪ್ರತಿಕ್ರಿಯಿಸಿದ್ದನ್ನು ಪತ್ರಿಕೆಯಲ್ಲಿ ಓದಿದಾಗ ಅವರ ಚಿಂತನೆಯ ಮೇಲೆ ವಯಸ್ಸು ಹಾಗೂ ಎಸ್.ಎಲ್. ಭೈರಪ್ಪ ಒಟ್ಟಾಗಿ ಸವಾರಿ ಮಾಡಿದಂತೆ ಅನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.