ಜೂನ್ 7ರಂದು ನಾಗಪುರದಲ್ಲಿ ನಡೆಯಲಿರುವ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅತಿಥಿಯಾಗಲು ಒಪ್ಪಿಕೊಂಡಿರುವುದು (ಪ್ರ.ವಾ., ಮೇ 29) ನಿಜಕ್ಕೂ ಆಘಾತಕಾರಿ ಸುದ್ದಿ.
ಸಂವಿಧಾನಾತ್ಮಕ ಹುದ್ದೆಯಲ್ಲಿ ಇದ್ದು ಬಂದವರು ರಾಜಕೀಯದ ಸೋಂಕು ಇರುವ ಸಂಸ್ಥೆಗಳೊಂದಿಗೆ ನಂಟು ಇಟ್ಟುಕೊಳ್ಳಬಾರದು ಎಂಬುದು ಒಂದು ಪ್ರತೀತಿ. ಆರ್ಎಸ್ಎಸ್ ಮೇಲೆ ಅನೇಕ ಗಂಭೀರ ಆಪಾದನೆಗಳಿವೆ. ರಾಜಕೀಯದಲ್ಲೂ ಈ ಸಂಘಟನೆ ಮೂಗು ತೂರಿಸಿದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆದ ಬಿಜೆಪಿಯ ಹೆಚ್ಚಿನ ನಾಯಕರು ಆರ್ಎಸ್ಎಸ್ ಜೊತೆಗಿನ ತಮ್ಮ ಸಂಬಂಧವನ್ನು ಎದೆತಟ್ಟಿ ಹೇಳಿಕೊಳ್ಳುತ್ತಿದ್ದಾರೆ. ಆರ್ಎಸ್
ಎಸ್ನ ಮುಂಚೂಣಿಯಲ್ಲಿರುವ ನಾಯಕರ ಮೂಲಕ ಬಿಜೆಪಿಗೆ ಆಗಾಗ ನಿರ್ದೇಶನಗಳನ್ನು ಸಹ ಕೊಡಲಾಗುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಇಂಥ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾಗವಹಿಸಿದರೆ ಆ ಸಂಘಟನೆಯನ್ನು ವೈಭವೀಕರಿಸಿದಂತಾಗುವುದಿಲ್ಲವೇ? ಹಿರಿಯ ಮುತ್ಸದ್ದಿ ಎನಿಸಿಕೊಂಡಿರುವ ಪ್ರಣವ್ ಅವರು ಕೇಸರಿ ಶಾಲು ಹೊದೆದು ತಮ್ಮ ವರ್ಚಸ್ಸಿಗೆ ಮಸಿ ಬಳಿದುಕೊಂಡಂತಾಗುವುದಿಲ್ಲವೇ?
ಪ್ರಣವ್ ಅವರು ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಂದು ‘ಐತಿಹಾಸಿಕ ಮಸಿ’ ಆಗುವುದರಲ್ಲಿ ಸಂದೇಹವಿಲ್ಲ.
– ಕೆ.ಎನ್. ಭಗವಾನ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.