‘ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಭಾಗವಹಿಸುವುದು ಒಂದು ಐತಿಹಾಸಿಕ ಮಸಿ ಆಗುವುದರಲ್ಲಿ ಸಂದೇಹವಿಲ್ಲ’ ಎಂದು ಕೆ.ಎನ್. ಭಗವಾನ್ ಅವರು ಹೇಳಿದ್ದಾರೆ (ವಾ.ವಾ.,ಜೂನ್ 1).
ಪ್ರಣವ್ ಮುಖರ್ಜಿ ಅವರು ಈಗ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇಲ್ಲ. ಅವರು ನಮ್ಮ ನಿಮ್ಮಂತೆ ಸಾಮಾನ್ಯ ಪ್ರಜೆ. ತಮಗೆ ಬೇಕಾದಲ್ಲಿಗೆ ಹೋಗಲು, ಬೇಕಾದುದನ್ನು ಮಾಡಲು ಅವರೀಗ ಸರ್ವತಂತ್ರ ಸ್ವತಂತ್ರರು. ಸಾಮಾನ್ಯ ಪ್ರಜೆಯೊಬ್ಬ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದು ‘ಐತಿಹಾಸಿಕ ಮಸಿ’ ಆಗುವುದಾದರೂ ಹೇಗೆ?
‘ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳೆಲ್ಲವೂ ಕೋಮುವಾದದಿಂದ ತುಂಬಿವೆ’ ಎಂಬುದು ಹೆಚ್ಚಿನ ಬುದ್ಧಿಜೀವಿಗಳ, ವಿಚಾರವಂತರ ಅಭಿಪ್ರಾಯವಾಗಿದೆ. ನಮ್ಮ ದೇಶದಲ್ಲಿ ಶ್ರೀರಾಮ ನವಮಿಯನ್ನಾಗಲೀ, ಕೃಷ್ಣಾಷ್ಟಮಿಯನ್ನಾಗಲೀ ರಾಷ್ಟ್ರೀಯ ಹಬ್ಬಗಳೆಂದು ಪರಿಗಣಿಸಲಾಗಿಲ್ಲ. ಆದರೆ, ಬುದ್ಧ ಪೂರ್ಣಿಮೆ ಹಾಗೂ ಮಹಾವೀರ ಜಯಂತಿಗಳನ್ನು ರಾಷ್ಟ್ರೀಯ ಹಬ್ಬಗಳ ಸಾಲಿನಲ್ಲಿ ಸೇರಿಸಲಾಗಿದೆ. ಮಾತ್ರವಲ್ಲ, ಆ ದಿನಗಳಂದು ರಜೆ ಘೋಷಿಸಿ, ಮಾಂಸ ಮಾರಾಟ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಇದೇಕೆ ಹೀಗೆ?
ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಗೋಮಾಂಸ ಭಕ್ಷಣೆಯನ್ನು ನಿಷೇಧಿಸಬೇಕೆಂಬ ಹಿಂದೂಗಳ ಬೇಡಿಕೆಯನ್ನು ‘ಆಹಾರದ ಹಕ್ಕು’ ಎಂಬ ತರ್ಕವನ್ನು ಮುಂದಿಟ್ಟುಕೊಂಡು ಬುದ್ಧಿಜೀವಿಗಳು, ವಿಚಾರವಂತರು ವಿರೋಧಿಸಿದ್ದಾರೆ. ಬುದ್ಧ ಪೂರ್ಣಿಮೆ ಹಾಗೂ ಮಹಾವೀರ ಜಯಂತಿಗಳಂದು ಮಾಂಸ ಮಾರಾಟ ನಿಷೇಧಿಸುವುದರಿಂದ ‘ಆಹಾರದ ಹಕ್ಕನ್ನು’ ಕಸಿದುಕೊಂಡಂತಾಗುವುದಿಲ್ಲವೇ?
–ಉಡುಪಿ ಅನಂತೇಶ ರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.