ADVERTISEMENT

ಪ್ರಶಸ್ತಿಯಲ್ಲಿ ತಾರತಮ್ಯ

ಅನ್ನಪೂರ್ಣ ವೆಂಕಟನಂಜಪ್ಪ
Published 27 ಅಕ್ಟೋಬರ್ 2015, 19:30 IST
Last Updated 27 ಅಕ್ಟೋಬರ್ 2015, 19:30 IST

ಇತ್ತೀಚೆಗೆ ಪ್ರತಿ ಮಹನೀಯರನ್ನೂ ಒಂದೊಂದು ಜಾತಿಗೆ ಕಟ್ಟುಹಾಕಿ, ಅದೇ ಜಾತಿಯವರಿಗೆ ಅವರ ಹೆಸರಿನ ಪ್ರಶಸ್ತಿಯನ್ನು ಸರ್ಕಾರ ಕೊಡುತ್ತಿದೆ. ಈ ಜಯಂತಿಗಳಲ್ಲಿ ಉಪಸ್ಥಿತರಿರುವ ವೇದಿಕೆಯ ಎಲ್ಲ ಗಣ್ಯರೂ ‘ಮಹಾವ್ಯಕ್ತಿ’ಗಳನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದೆಂದು ಹೇಳುತ್ತಲೇ ಅದೇ ಕೆಲಸವನ್ನು ಮುಂದುವರಿಸುತ್ತಿದ್ದಾರೆ.

ಹಾಗೆಯೇ ಇವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯ ಗೌರವ ಹಣದಲ್ಲೂ ತಾರತಮ್ಯವಿದೆ. ಬಸವಣ್ಣನವರ ಪ್ರಶಸ್ತಿಗೆ ₹ 10 ಲಕ್ಷ, ವಾಲ್ಮೀಕಿಗೆ ₹ 5 ಲಕ್ಷ, ಕನಕದಾಸರಿಗೆ ₹ 3 ಲಕ್ಷ... ಇತ್ಯಾದಿ.

ಸರ್ಕಾರವು ವಿವಿಧ ಜಯಂತಿಗಳಿಗೆ ರಜಾ ನೀಡುವ ನೀತಿ ಸಹ ಸರಿಯಲ್ಲ. ಆ ರಜೆ, ಮೋಜಿನ ರಜೆಯಾಗಿ ಪರಿವರ್ತಿತವಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಕರ್ತೃ ಡಾ.ಅಂಬೇಡ್ಕರ್‌ರವರ ಜಯಂತಿಯನ್ನುಳಿದು ಮತ್ತಿತರ ಮಹಾತ್ಮರ ಜಯಂತಿಗಳಿಗೆ ರಜೆ ನೀಡಿರುವುದನ್ನು ರದ್ದುಪಡಿಸಬೇಕು. ಜಯಂತಿಗಳನ್ನು ಆಚರಿಸುವುದು, ಪ್ರಶಸ್ತಿಗಳನ್ನು ನೀಡುವುದು ಚುನಾವಣಾ ದೃಷ್ಟಿಯನ್ನಿಟ್ಟುಕೊಂಡು ಆಯಾ ಸಮುದಾಯವನ್ನು ಸಂತೃಪ್ತಿಗೊಳಿಸುವ ಪ್ರಯತ್ನವಾಗಿದೆ.

ಯಾವ್ಯಾವುದೋ ಕಾಲದ ಘಟನೆಗಳಿಗೆ ಪ್ರತಿಕ್ರಿಯಿಸುವ ನಮ್ಮ ಬುದ್ಧಿಜೀವಿಗಳು ಈ ಸಮಕಾಲೀನ ತಾರತಮ್ಯಗಳ ವಿರುದ್ಧ  ಧ್ವನಿ ಎತ್ತುತ್ತಿಲ್ಲವೇಕೆ? ಮಹಾತ್ಮರ ವಿಚಾರಧಾರೆಗಳು, ಅವರ ಜೀವನದ ಬಗ್ಗೆ ಒಳ್ಳೆಯ ಸಾಹಿತ್ಯ, ಉಪನ್ಯಾಸಗಳು ಎಲ್ಲ ವರ್ಗದ, ಎಲ್ಲ ಧರ್ಮೀಯರಿಂದ, ಸಾಮಾಜಿಕ ಸಂಘಟನೆಗಳಿಂದ ಮೂಡಿಬರಲಿ. ಸರ್ಕಾರ ಏನಿದ್ದರೂ ಎಲ್ಲ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.