ರಾಜ್ಯದ ಈ ವರ್ಷದ ಮುಂಗಡ ಪತ್ರದ ಹಿನ್ನೆಲೆಯಲ್ಲಿ ಕೆಲವು ಮಠಾಧಿಪತಿಗಳು ಮುಖ್ಯಮಂತ್ರಿಯವರನ್ನು ಇತ್ತೀಚೆಗೆ ಭೇಟಿ ಮಾಡಿ ತಮ್ಮ ಸಮುದಾಯಗಳಿಗೆ ಹೆಚ್ಚಿನ ಅನುದಾನ ಕೊಡುವಂತೆ ಒತ್ತಾಯ ಮಾಡಿದರೆಂಬ ವರದಿಗಳನ್ನು ಓದಿ ಬೇಸರವಾಯಿತು.
ರಾಜ್ಯದ ಎಲ್ಲ ಜಾತಿ, ಜನ ವರ್ಗಗಳ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ. ಅದು ಸಾಮಾಜಿಕ ನ್ಯಾಯದ ಒಂದು ಭಾಗ. ಯಾವುದೇ ಸಮುದಾಯದ ಅಭಿವೃದ್ಧಿ ಎಂದರೆ ಆ ಸಮುದಾಯಗಳ ಕವಿ, ಸಮಾಜ ಸುಧಾರಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭವನಗಳನ್ನು ಕಟ್ಟುವುದು, ಜಯಂತಿ ಆಚರಿಸುವುದು, ಅಂದು ಸರ್ಕಾರಿ ರಜೆ ಕೊಡುವುದು ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದು ನಿಂತಿದೆ.
ಹೀಗಾಗಿ ಎಲ್ಲ ಜಾತಿಗಳ ಜನರನ್ನು ಓಲೈಸುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಅನುದಾನಕ್ಕೆ ಮಠಾಧಿಪತಿಗಳು ಒತ್ತಾಯಿಸುವುದು ಈ ಓಲೈಕೆಯ ಮುಂದುವರಿದ ಭಾಗ.
ಮುಂಗಡ ಪತ್ರ ರಾಜ್ಯದ ಜನರ ತೆರಿಗೆ ಹಣದ ಸದುಪಯೋಗದ ಕಾರ್ಯಸೂಚಿ ಎನ್ನುವುದನ್ನು ಸರ್ಕಾರ ಮತ್ತು ಮಠಾಧಿಪತಿಗಳು ಮರೆತಿದ್ದಾರೆ. ತೆರಿಗೆ ಹಣ ಸರ್ಕಾರದ ಜನಪ್ರಿಯತೆಗೆ ಮತ್ತು ಚುನಾವಣೆಯಲ್ಲಿ ಮತ ಗಳಿಕೆಗೆ ಬಳಕೆಯಾಗುತ್ತಿದೆ.
ಸರ್ಕಾರ ಮುಂಗಡ ಪತ್ರ ತಯಾರಿಸುವಾಗ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕೇ ವಿನಾ ಕೆಲ ಜಾತಿಗಳ ಅಭಿವೃದ್ಧಿಯನ್ನಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.