‘ಹಿರಿಯ ರಾಜಕಾರಣಿಗಳು’ ಎನಿಸಿಕೊಂಡವರು ತೀರಾ ಬಾಲಿಶ ರೀತಿಯಲ್ಲಿ ಮಾತನಾಡುವುದು, ಅಂಥದ್ದೇ ಧೋರಣೆ ತಳೆದಿರುವುದು ಮತ್ತು ಮಾಧ್ಯಮಗಳ ಮೂಲಕ ಅದನ್ನು ವ್ಯಕ್ತಪಡಿಸುವುದು ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಸ್ಥರೂ ಮಾತನ್ನು ಶೋಧಿಸಿ ಹೊರ ಹಾಕುತ್ತಿಲ್ಲ. ಗಾಜಿನ ಮನೆಯೊಳಗೆ ಇದ್ದೂ ಕಲ್ಲು ಎಸೆವ ರೀತಿ ಅತ್ಯಂತ ಬೇಜವಾಬ್ದಾರಿ, ನಾಚಿಕೆಗೇಡಿನ ವಿಷಯ. ಸಾಧಾರಣೀಕೃತ ನಿಂದೆ ಮಾತ್ರ ಅಲ್ಲದೆ ವೈಯಕ್ತಿಕ ನೆಲೆಯಲ್ಲಿ ಕೆಟ್ಟ, ಅಸಭ್ಯ, ಕೀಳು ಶಬ್ದಗಳನ್ನು ಬಳಸಿ ಬೈಯುವುದೂ ವರದಿಯಾಗುತ್ತಿದೆ. ವೋಟು ಕೇಳುವ ಕ್ರಮ ಇದಲ್ಲ.
ಗೆದ್ದರೆ ಏನು ಮಾಡುತ್ತೇವೆ ಎಂಬುದನ್ನು ವರ್ತಮಾನದೊಡನೆ ಕೂಡಿಸಿ ಆಶ್ವಾಸನೆಗಳನ್ನು ಕೊಡುವ ರೀತಿ ನೀತಿಯೇ ಅತ್ಯುತ್ತಮ ಕ್ರಮ. ವಿರೋಧ ಪಕ್ಷದವರನ್ನು ಕಳ್ಳರು, ಸುಳ್ಳರು, ಖದೀಮರು... ಎಂದು ಬೈಯುವುದು ಜನ ಪ್ರತಿನಿಧಿಗಳಿಗೆ ಶೋಭಿಸುವುದಿಲ್ಲ. ಇವೆಲ್ಲವನ್ನೂ ನೋಡುತ್ತಿದ್ದರೆ ನಮ್ಮನ್ನು ಆಳುತ್ತಿರುವವರು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ನೋವಾಗುವುದಿಲ್ಲವೇ ಮತ್ತು ಮುಂದೇನು ಎಂದು ಭಯವಾಗುವುದಿಲ್ಲವೇ?
-ಎಂ. ರಾಮಕೃಷ್ಣ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.