ADVERTISEMENT

ಬೆಲೆಗಳ ನಾಗಾಲೋಟಕ್ಕೆ ತಡೆಯಾವಾಗ?

ಸಂಗಪ್ಪ ಗಾಣಿಗೇರ, ಹುನಗುಂದ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಈಗಾಗಲೇ ಸಂಪುಟ ಸಮಿತಿಯಲ್ಲಿ ನಿರ್ಣಯಿಸಿದಂತೆ ಸಕ್ಕರೆ ಮೇಲಿನ ನಿಯಂತ್ರಣ ತೆಗೆಯಲು ಕೇಂದ್ರ ಅಣಿಯಾಗಿದೆ. ಇದರ ಪರಿಣಾಮವಾಗಿ ಈಗ 1 ಕೆ.ಜಿ. ಸಕ್ಕರೆ ಬೆಲೆ ರೂ 40 ಇದ್ದದ್ದು ರೂ 60ಕ್ಕೆ ಏರಿದರೂ ಅಶ್ಚರ್ಯವಿಲ್ಲ. ಇದರ ಬೆನ್ನ ಹಿಂದೆ ಖಾದ್ಯ ಪದಾರ್ಥಗಳ ಬೆಲೆಯೂ ಹೆಚ್ಚಾಗುತ್ತದೆ. ಕಲ್ಯಾಣ ರಾಜ್ಯದ ನೀತಿಯು, ಖಾಸಗೀಕರಣ, ಅಂತರರಾಷ್ಟ್ರೀಕರಣ ನೀತಿಯಲ್ಲಿ ಸತ್ತು ಹೋಗಿದೆ. ಸಮಾಜವಾದಿ ನೀತಿಯು ಗಾಳಿಯಲ್ಲಿ ತೂರಲ್ಪಡಹತ್ತಿದೆ. ಶ್ರೀಮಂತ ಮತ್ತು ಬಡವರ ಆರ್ಥಿಕತೆಯಲ್ಲಿ ಭಾರಿ ಕಂದರ ಏರ್ಪಟ್ಟಿದೆ.

1977-80ರ ವೇಳೆಯಲ್ಲಿ ಸಕ್ಕರೆ ಬೆಲೆ 1 ಕೆ. ಜಿ.ಗೆ ರೂ 2 ಇತ್ತು. ಇವತ್ತು ರೂ40 ಆಗಿದೆ. ಸರ್ಕಾರದ ತಪ್ಪು ನಿರ್ಯಾತ ನೀತಿಯಿಂದ, ಗೋಧಿ ಮತ್ತು ಅಕ್ಕಿಯ ಬೆಲೆಗಳೂ ಗಗನಕ್ಕೇರಿವೆ. ಹೀಗಾದರೆ ಮಧ್ಯಮವರ್ಗದವರ ಗತಿ ಏನು?

ಕೃಷಿ ಕ್ಷೇತ್ರದಲ್ಲಿ ಗೊಬ್ಬರ ಧಾರಣೆ ಏರುತ್ತಾ ನಡೆದಿದೆ. ಆದರೆ ರೈತನ ಬೆಳೆಗಳಿಗೆ ಬೆಲೆ ಪಾತಾಳಕ್ಕೆ ಇಳಿದಿದೆ. ರೈತನು ಸಾಲದಲ್ಲಿ ಹುಟ್ಟಿ, ಸಾಲದಲ್ಲೇ ಸಾಯುವ ಪರಿಸ್ಥಿತಿ ಬಂದಿದೆ. ಆಗೊಮ್ಮೆ ಈಗೊಮ್ಮೆ ಸಾಲ ಮನ್ನಾದಿಂದ ರೈತರಿಗೇನೂ ಲಾಭವಿಲ್ಲ. ಅವನ ಉಳಿತಾಯ ಶಕ್ತಿ ಕುಂದಿದೆ. ರೈತನ ಮಕ್ಕಳು, ದುಬಾರಿ ಶಿಕ್ಷಣಕ್ಕೆ ಅಂಜಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವನ ಮಾತಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಕಾರ್ಮಿಕ ವರ್ಗದ ಕಥೆಯು ಭಿನ್ನವಾಗಿಲ್ಲ ಕಾರ್ಮಿಕರ, ರೈತರ ಮಕ್ಕಳು ನಿರುದ್ಯೋಗಿಗಳಾಗಿದ್ದಾರೆ. ಮಿತಿ ಮೀರಿದ ಭ್ರಷ್ಟಾಚಾರವು ಸಾರ್ವಜನಿಕ ನೆಮ್ಮದಿಯನ್ನು ಹಾಳು ಮಾಡಿದೆ.
ಈ ಸಲದ ಚುನಾವಣೆಯಲ್ಲಿ ನೀತಿವಂತರನ್ನು ಆರಿಸಿದರೆ, ಹಗರಣಮುಕ್ತ, ಭ್ರಷ್ಟಾಚಾರ ಮುಕ್ತ, ಶಕ್ತಿಯುತ ಸರ್ಕಾರ ರಚನೆಯಾಗಿ, ರಾಜ್ಯ, ದೇಶವು ಸುಭಿಕ್ಷವಾಗಲಿ ಎಂದು ಹಾರೈಸುವೆನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.