ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಪ್ರತಿ ದಿನ ಆನೇಕಲ್ ತಾಲ್ಲೂಕು ಚಂದಾಪುರದಿಂದ - ಆಡುಗೋಡಿಗೆ ಜಿ - 2 ಬಸ್ನಲ್ಲಿ ಪ್ರಯಾಣ ಮಾಡುತ್ತೇನೆ. ಆ ಬಸ್ಸಿನಲ್ಲಿ ಕಳ್ಳತನವಾಗುವುದು ಸರ್ವೆ ಸಾಮಾನ್ಯ. ಇತ್ತೀಚೆಗೆ ಜಿ -2 ಬಸ್ಸಿನಲ್ಲಿ ನಡೆದಂಥ ಘಟನೆ ಏನೆಂದರೆ ಬೆಳಿಗ್ಗೆ 8 ಗಂಟೆಗೆ ಚಂದಾಪುರದಿಂದ ಬಿಟ್ಟ ಬಸ್ 8-30ಕ್ಕೆ ಗಾರೆಬಾವಿ ಪಾಳ್ಯಕ್ಕೆ ಬಂದು ಸೇರಿತು.
ಅಲ್ಲಿಗೆ ಬರುವಷ್ಟರಲ್ಲಿ ಜನ ಬಸ್ಸಿನಲ್ಲಿ ಕಿಕ್ಕಿರಿದು ತುಂಬಿದ್ದರು. ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ತನ್ನ ಮೊಬೈಲ್ ಕಳೆದುಕೊಂಡ. ಈ ವಿಷಯವನ್ನು ಮಹಿಳಾ ಕಂಡಕ್ಟರ್ಗೆ ತಿಳಿಸಿದ. ತಕ್ಷಣ ಆಕೆ ಬಸ್ ಬಾಗಿಲು ಹಾಕಿಸಿ ಎಲ್ಲರನ್ನೂ ‘ಯಾರು ಮೊಬೈಲ್ ತೆಗೆದು ಕೊಂಡಿದ್ದೀರಾ? ತೆಗೆದು ಕೊಂಡಿದ್ದರೆ ದಯಮಾಡಿ ಕೊಡಿ’ ಎಂದು ಕೇಳಿಕೊಂಡಳು. ಆದರೆ ಯಾರೂ ಉತ್ತರಿಸಲಿಲ್ಲ. ಆಕೆ ಡ್ರೈವರ್ಗೆ ಸೀದಾ ಮಡಿವಾಳ ಪೊಲೀಸ್ ಠಾಣೆಗೆ ಹೊರಡಿ ಎಂದು ಹೇಳಿದಳು. ಚಾಲಕ ಬೇರೆಲ್ಲೂ ನಿಲ್ಲಿಸದೆ ಮಡಿವಾಳ ಪೊಲೀಸ್ ಠಾಣೆಗೆ ಬಸ್ ತಂದು ನಿಲ್ಲಿಸಿದರು.ಕೂಡಲೇ ಆ ಮಹಿಳಾ ಕಂಡಕ್ಟರ್ ಪೊಲೀಸ್ ಠಾಣೆಗೆ ಹೋಗಿ ವಿಷಯ ಮುಟ್ಟಿಸಿ ಪೊಲೀಸರನ್ನು ಬಸ್ ಇರುವ ಸ್ಥಳಕ್ಕೆ ಕರೆತಂದಳು. ಅಷ್ಟರಲ್ಲಿ ಇತ್ತ ಬಸ್ನಲ್ಲಿ 4 ಮೊಬೈಲ್ಗಳು ಕೆಳಗೆ ಉದುರಿ ಬಿದ್ದಿದ್ದವು. ಆದರೆ ಕಳ್ಳ ಯಾರೂ ಎಂದು ತಿಳಿಯಲಿಲ್ಲ. ಪೊಲೀಸರು ಒಬ್ಬೊಬ್ಬರನ್ನು ಪರೀಕ್ಷಿಸಿ ಕೊನೆಗೆ ಇಬ್ಬರನ್ನು ಹಿಡಿದರು.
ಮೊಬೈಲ್ ಸಿಕ್ಕವರಿಗೆ ತುಂಬಾ ಸಂತೋಷವಾಯಿತು. ಆ ಮಹಿಳಾ ಕಂಡಕ್ಟರ್ ಜಯಮ್ಮ ಎನ್ನುವವರು. ಆಕೆಯ ಧೈರ್ಯ - ಸಮಯ ಸ್ಫೂರ್ತಿ ಕಂಡು ಬಸ್ನಲ್ಲಿದ್ದವರೆಲ್ಲಾ ‘ಭೇಷ್ ಕಂಡಕ್ಟರ್ ಭೇಷ್’ ಎಂದು ಕೊಂಡಾಡಿದ್ದೆ ಕೊಂಡಾಡಿದ್ದು. ಅಂತರರಾಷ್ಟ್ರೀಯ ಮಹಿಳಾ ದಿನಗಳಂದು ಇಂಥ ಮಹಿಳಾ ಕಂಡಕ್ಟರ್ಗಳನ್ನೇಕೆ ಸನ್ಮಾನಿಸಬಾರದು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.