ಮುಂಬರುವ ರಾಜ್ಯದ ಬಜೆಟ್ನಲ್ಲಿ ಮಠಗಳಿಗೆ ನೇರವಾಗಿ ಹಣ ನೀಡುವುದಿಲ್ಲವೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವು ಸ್ವಾಗತಾರ್ಹವಾದುದು. ಅದರಲ್ಲೂ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸರ್ಕಾರದ ಈ ನಿಲುವನ್ನು ಅವರು ಬಹಿರಂಗಪಡಿಸಿರುವುದು ಯೋಚಿಸಬೇಕಾದ ಅಂಶ.
ಏಕೆಂದರೆ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ, ರಾಜ್ಯದ ಹಲವಾರು ಮಠಗಳಿಗೆ ಸರ್ಕಾರದ ಬೊಕ್ಕಸದಿಂದ ನೂರಾರು ಕೋಟಿ ರೂಪಾಯಿಗಳ ದಾನ ನೀಡಿದ್ದರು ಎಂಬ ಟೀಕೆಯಂತೂ ಸಾರ್ವಜನಿಕ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಕೇಳಿಬರುತ್ತಿರುವುದುಂಟು.
ಅದರಲ್ಲೂ ಅನುದಾನ ನೀಡಬೇಕೆಂದು ಯಾವ ಮಠವೂ ಬಿ.ಎಸ್.ವೈ.ಗೆ ಅರ್ಜಿ ಸಲ್ಲಿಸಿರಲಿಲ್ಲ ಎಂಬ ತಮ್ಮ ಸರಳ ಮಾತಿನ ಮೂಲಕ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದ ಕೋಟಿ ಕೋಟಿಗಳ ಕೋಮುವಾದಿ ರಾಜಕೀಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಷ್ಟೇ ಸರಳವಾಗಿ ಬಹಿರಂಗಪಡಿಸಿದ್ದಾರೆ. ಮಠಗಳಿಗೆ ಈ ರೀತಿಯಾಗಿ ದಾನ ಮಾಡಿರುವ ಯಡಿಯೂರಪ್ಪನವರು ಚರ್ಚು ಮತ್ತು ಮಸೀದಿಗಳಿಗೂ ದಾನ ನೀಡಬಹುದಾಗಿತ್ತಲ್ಲವೆ?
-ಡಾ. ಮ. ನ. ಜವರಯ್ಯ, ಮೈಸೂರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.