ADVERTISEMENT

ಮತ್ತೊಂದು ಜನಾಂದೋಲನ ಅನಿವಾರ್ಯವೇ?

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST

ಜನಲೋಕಪಾಲ ಕರಡು ಮಸೂದೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕರೆದಿದ್ದ ಜಂಟಿ ಸಮಿತಿಯ ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮಸೂದೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿಯೂ ಸೇರಿದಂತೆ ನ್ಯಾಯಾಧೀಶರು ಹಾಗೂ ಸಂಸದರುಗಳನ್ನು ಒಳಗೊಳ್ಳುವ ವಿಚಾರದಲ್ಲಿ ಸಲ್ಲದ ಅಪವಾದಗಳನ್ನು ಎತ್ತಿರುವುದು ನಿರೀಕ್ಷಿತವೇ ಆಗಿದೆ.

ಜನಗಳಿಂದಲೂ ಸಕಲ ಸೌಲಭ್ಯಗಳೆಲ್ಲವನ್ನೂ ಪಡೆದು ತಾವು ಮಾಡುವ ಭ್ರಷ್ಟಾಚಾರ, ಸಮಾಜ ವಿರೋಧಿ ಚಟುವಟಿಕೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನುವಾಗುವಂತೆ ಕಾಲ ಕಾಲಕ್ಕೆ ಸಂವಿಧಾನ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಸುಭದ್ರ ಕೋಟೆಯನ್ನು ಕಟ್ಟಿಕೊಂಡಿರುವ ಈ ಮಂದಿ (ರಾಜಕಾರಣಿಗಳು) ಏಕಾಏಕಿ ತಮ್ಮನ್ನು ಜನಸಾಮಾನ್ಯರ ಜೊತೆ ಕಾನೂನು ವ್ಯಾಪ್ತಿಗೆ ಒಳಪಡಿಸಿಕೊಳ್ಳಲು ಹಿಂದೇಟು ಹಾಕುವುದು ಸಹಜವೇ ಆಗಿದೆ. ಇವರು ಪ್ರಾಮಾಣಿಕರಾಗಿದ್ದರೆ. ಈ ಬಗೆಯ ಹಿಂಜರಿಕೆ ಏಕೆ?

ಆದರೆ ಯಾವುದಕ್ಕೂ ಕಾಲಮಿತಿ ಇರುವಂತೆ ಈಗ ಜನರು ಎಚ್ಚೆತ್ತಿದ್ದಾರೆ. ರಾಜಕಾರಣಿಗಳ ಪ್ರತಿ ಚಲನವಲನಗಳನ್ನು ಶೀಘ್ರಗತಿಯಲ್ಲಿ ಅರಿಯಬಲ್ಲವರಾಗಿದ್ದಾರೆ.
ಅಮಾಯಕ ಜನತೆ ಇನ್ನು ಮುಂದೆ ಮೋಸ ಹೋಗಲು ತಯಾರಿಲ್ಲ. ಪ್ರಸಕ್ತ ಲೋಕಪಾಲ ಕರಡು ಮಸೂದೆಗೆ ಸರ್ಕಾರಿ ಪ್ರತಿನಿಧಿಗಳು ಒಡ್ಡಿರುವ ಅಡೆ - ತಡೆಗಳು ಕೇವಲ ಕಾಲಹರಣದ ಪ್ರಯತ್ನಗಳಾಗಬಹುದೇ ಹೊರತು ಮಸೂದೆಯ ಜಾರಿಗೆ ಅಡ್ಡಿ ಪಡಿಸುವ ಯಾವುದೇ ಶಕ್ತಿಯನ್ನು ಜನತೆ ಸಹಿಸುವುದಿಲ್ಲ.

 ಅಣ್ಣಾ ಹಜಾರೆ ಮತ್ತು ಅವರ ತಂಡದ ಈ ಪ್ರಯತ್ನಕ್ಕೆ ವ್ಯಾಪಕ ಜನಬೆಂಬಲ ಇರುವುದಕ್ಕೆ ಅವರ ಇತ್ತೀಚಿನ ಸಾರ್ವಜನಿಕ ಸಭೆಗಳೇ ಸಾಕ್ಷಿ. ಅನಿವಾರ್ಯವಾದರೆ ಲೋಕ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಈಗ ಯುವಜನತೆ ಸಿದ್ಧರಾಗಿದ್ದಾರೆ. ಇವರನ್ನು ಎದುರು ಹಾಕಿಕೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆಯೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.