ಸಾರಿಗೆ ಇಲಾಖೆ ನೌಕರರು ಹಾಗೂ ಸರ್ಕಾರಿ ನೌಕರರು ಈ ವರ್ಷದ ವರ್ಗಾವಣೆಯನ್ನು ಪಡೆದು, ಸ್ಥಳಾಂತರಗೊಂಡ ಜಾಗದಲ್ಲಿ ಈಗಾಗಲೆ ಕರ್ತವ್ಯ ಆರಂಭಿಸಿದ್ದಾರೆ. ಕೆಲವು ಇಲಾಖೆಗಳಲ್ಲಿ ವರ್ಷಪೂರ್ತಿ ವರ್ಗಾವಣೆಯ ಸುಗ್ಗಿ ನಡೆಯುತ್ತದೆ. ಶಿಕ್ಷಕರ ವಿಷಯದಲ್ಲಿ ಮಾತ್ರ ಇವೆಲ್ಲವೂ ಉಲ್ಟಾ!
ಶಿಕ್ಷಕರ ವರ್ಗಾವಣೆಯ ಮಾರ್ಗಸೂಚಿ ಹೊರಡಿಸಿ ಮೂರು ತಿಂಗಳಾಗಿದೆ. ಆದರೆ, ಅದರಂತೆ ಏನೂ ನಡೆಯುತ್ತಿಲ್ಲ. ಮಾರ್ಗಸೂಚಿ ಪ್ರಕಾರವೇ ಎಲ್ಲವೂ ನಡೆದಿದ್ದರೆ ಈಗಾಗಲೇ ವರ್ಗಾವಣೆಯ ಅಂತಿಮ ಪಟ್ಟಿ ಹೊರಡಿಸಿ, ಖಾಲಿ ಹುದ್ದೆಗಳನ್ನೂ ಪ್ರಕಟಿಸಿ, ಮುಂದಿನ ವಾರದಿಂದ ಕೌನ್ಸೆಲಿಂಗ್ ಪ್ರಾರಂಭವಾಗಬೇಕಿತ್ತು.
‘ಏಪ್ರಿಲ್ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮುಗಿಸುತ್ತೇವೆ…’ ಎಂದು ಶಿಕ್ಷಣ ಸಚಿವರು ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಇಲಾಖೆ ಈವರೆಗೆ ತಾತ್ಕಾಲಿಕ ಪಟ್ಟಿಯನ್ನೂ ಪ್ರಕಟಿಸಿಲ್ಲ.
ಈ ವಿಳಂಬ ಗತಿಗೆ ಕಾರಣವೇನು ಎಂಬುದನ್ನಾದರೂ ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ನೀಡಬೇಕಲ್ಲವೇ? ಅದೂ ಆಗಿಲ್ಲ. ಈಗಂತೂ ಚುನಾವಣೆ ಘೋಷಣೆಯಾಗಿರುವುದರಿಂದ ಕಾರಣಗಳಿಗೆ ಬರವಿಲ್ಲ. ಈಗ ಚುನಾವಣೆಯ ಕಾರಣ, ಆನಂತರ ‘ಶೈಕ್ಷಣಿಕ ಚಟುವಟಿಕೆ ಆರಂಭವಾಗಿದೆ’ ಎಂಬ ಕಾರಣ, ಅಕ್ಟೋಬರ್ ಬಂದರೆ ‘ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯಿಂದ ವರ್ಷದ ಮಧ್ಯದಲ್ಲಿ ವರ್ಗಾವಣೆ ಸರಿಯಲ್ಲ’ ಎಂಬ ಕಾರಣ ಕೊಡಬಹುದು. ಒಟ್ಟಾರೆ ಬಲಿಪಶುಗಳಾಗುತ್ತಿರುವವರು ವರ್ಗಾವಣೆಗಾಗಿ ಕಾದು ಕುಳಿತಿರುವ ಶಿಕ್ಷಕರು.
ಈಗಾಗಲೇ ಸಿದ್ಧಪಡಿಸಿರುವ ಮಾರ್ಗಸೂಚಿಯನ್ನು
ಪಾಲಿಸುವ ಬದ್ಧತೆಯನ್ನು ಸರ್ಕಾರ ಮತ್ತು ಇಲಾಖೆ ತೋರ್ಪಡಿಸುವುದು ಅಗತ್ಯ. ಮೇ ಅಂತ್ಯದೊಳಗಾದರೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಸಿಗುವುದೇ?
– ಎಂ.ಮಾದೇಶ್, ಹೊಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.