‘ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳ ಜನರಿಗೂ ಶೇ 15ರಷ್ಟು ಮೀಸಲಾತಿ ಕಲ್ಪಿಸಬೇಕು’ ಎಂಬ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರ ಹೇಳಿಕೆ ಸ್ವಾಗತಾರ್ಹ.
ಕೇಂದ್ರದ ಇನ್ನೊಬ್ಬ ಸಚಿವ ಹಾಗೂ ಭಾರತೀಯ ರಿಪಬ್ಲಿಕನ್ ಪಕ್ಷದ ಮುಖಂಡ ರಾಮದಾಸ ಆಠವಲೆ ಎರಡು ವರ್ಷಗಳಿಂದ ಇದೇ ವಿಚಾರವನ್ನು ಪ್ರತಿಪಾದಿಸುತ್ತಿದ್ದಾರೆ. ಚೆನ್ನೈ ಹೈಕೋರ್ಟ್ ಸಹ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳವರಿಗೂ ಮೀಸಲಾತಿ ನೀಡಿಕೆಯ ಬಗ್ಗೆ ಪರಿಶೀಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕಳೆದ 70 ವರ್ಷಗಳಿಂದ ಎಸ್.ಸಿ., ಎಸ್.ಟಿ. ಮೀಸಲಾತಿ ಹಾಗೂ 24 ವರ್ಷಗಳಿಂದ ಓ.ಬಿ.ಸಿ. ಮೀಸಲಾತಿ ಮುಂದುವರಿಕೆಯಿಂದ ಸಹಜವಾಗಿ ಮೇಲ್ಜಾತಿಗಳಲ್ಲಿ ಅಸಹನೆ ಮಡುಗಟ್ಟಿದ್ದು, ತಮಗೂ ಮೀಸಲಾತಿ ನೀಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಗುಜರಾತ್, ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ವ್ಯಾಪಕ ಚಳವಳಿಗಳು ನಡೆಸಿವೆ.
ರಾಷ್ಟ್ರದ ಏಕತೆ, ಸಾಮಾಜಿಕ ಸಾಮರಸ್ಯದ ಬಲವರ್ಧನೆಯ ನಿಟ್ಟಿನಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ಕೊಡಬೇಕೆಂಬ ಬೇಡಿಕೆ ನ್ಯಾಯೋಚಿತವಾಗಿದೆ. ಈ ಕ್ರಮದಿಂದ ಆ ಸಮುದಾಯಗಳಲ್ಲಿ ಮನೆ ಮಾಡಿರುವ ಅಸಮಾಧಾನ ತಗ್ಗುವುದಲ್ಲದೆ ಮೀಸಲಾತಿ ವಿರೋಧಿ ಸಂಘರ್ಷಕ್ಕೆ ತೆರೆ ಎಳೆಯಬಹುದು ಹಾಗೂ ತಮಗೆ ಈ ದೇಶದಲ್ಲಿ ಭವಿಷ್ಯವಿಲ್ಲ ಎಂಬ ಕೊರಗಿನಲ್ಲಿ ವಿದೇಶಕ್ಕೆ ತೆರಳುವ ಸಂಪ್ರದಾಯಕ್ಕೆ ತೆರೆ ಬೀಳಬಹುದು.
ಕಾಂಗ್ರೆಸ್ ಮತ್ತಿತರ ಪಕ್ಷಗಳು ಸಹ ಮೇಲ್ಜಾತಿಗಳಿಗೆ ಮೀಸಲಾತಿ ವಿಸ್ತರಣೆಗೆ ಸಹಮತ ವ್ಯಕ್ತಪಡಿಸಿವೆ. ಆದುದರಿಂದ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸದೆ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳ ಬಡವರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.