ದಾವಣಗೆರೆಯಲ್ಲಿ ಉತ್ತರ ಮತ್ತು ದಕ್ಷಿಣ ಎರಡೂ ಕ್ಷೇತ್ರಗಳಲ್ಲೂ ಒಂದು ಕೋಟಿಗೂ ಅಧಿಕ ವೆಚ್ಚದ ಎರಡು ಗಾಜಿನ ಮನೆಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದೂ ಹೇಳಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ.
ಆದರೆ, ಅದಕ್ಕೆ ಮೊದಲು ಈ ಕ್ರಮಗಳನ್ನು ಕೈಗೊಳ್ಳಲಿ. ಗಾಜಿನ ಮನೆಗೆ ಹೋಗುವ, ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳು ಕೆಟ್ಟು ಹೋಗಿವೆ; ಗುಂಡಿಗಳು ಬಿದ್ದಿವೆ. ಮುಖ್ಯವಾಗಿ ನಗರದ ಜೀವನಾಡಿಯಾಗಿರುವ ಪಿ.ಬಿ. ರಸ್ತೆ ವಿಸ್ತರಣೆಯಾಗಬೇಕು. ಹಲವು ವರುಷಗಳಿಂದ ಈ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಬಂದಿದ್ದಾರೆ.
ಆದರೆ, ಇದುವರೆಗೂ ಇದನ್ನು ಕಾರ್ಯಗತ ಗೊಳಿಸಿಲ್ಲ. ಹಾಗಾಗಿ, ಶಾಮನೂರು ಅವರು ತಮ್ಮ ಅವಧಿಯಲ್ಲಾದರೂ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಜಿಲ್ಲೆಯ ಜನರಿಗೆ ಉಪಕಾರ ಮಾಡುವಂತಾಗಲಿ!. ನಗರದ ಕೆಲವು ಪ್ರದೇಶಗಳಲ್ಲಿ ನಿತ್ಯ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ಕಸ ವಿಲೇವಾರಿ ಸಮಸ್ಯೆ ಇದೆ. ಹಂದಿಗಳ ಮತ್ತು ಬಿಡಾಡಿ ದನಗಳ ವಿಪರೀತ ಕಾಟ ಬೇರೆ. ಇವೆಲ್ಲವುಗಳಿಗೂ ಪರಿಹಾರ ಕಲ್ಪಿಸಲಿ.
ಆಗ ದಾವಣಗೆರೆಯು ಗಾಜಿನ ಮನೆ ನಿಮಾರ್ಣಕಿಂತಲೂ, ವಿಮಾನ ನಿಲ್ದಾಣಕಿಂತಲೂ ಹೆಚ್ಚು ಸುಂದರವಾಗಿ ಕಾಣುತ್ತದೆ. ನಂತರ ಗಾಜಿನ ಮನೆ ಹಾಗೂ ವಿಮಾನ ನಿಲ್ದಾಣ ನಿರ್ಮಾಣವಾದರೆ, ಹೆಚ್ಚು ಉಪಯುಕ್ತವಾದೀತು. ಗಾಜಿನಮನೆ, ವಿಮಾನ ನಿಲ್ದಾಣ ಕೈಬಿಟ್ಟರೂ ಪರವಾಗಿಲ್ಲ. ಮೂಲ ಸೌಕರ್ಯಗಳಿಗೆ ಸಚಿವರು ಆದ್ಯತೆ ನೀಡಲಿ...!
–ಮಹಮ್ಮದ್ ರಫೀ ಎನ್, ದಾವಣಗೆರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.