ADVERTISEMENT

ಮೌಲ್ಯಮಾಪಕರಿಗೆ ದಂಡ ಶುಲ್ಕ ಬೇಡ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಕೆಂದು ಯಾರೂ ಬಯಸುವುದಿಲ್ಲ. ಆದರೆ ಆಕಸ್ಮಿಕವಾಗಿ ಕೆಲವು ನ್ಯೂನತೆಗಳು ಸಂಭವಿಸುತ್ತವೆ. ಅದನ್ನು ಸರಿಪಡಿಸಿ ನ್ಯಾಯ ಒದಗಿಸುವುದು ವಿವೇಕದ ಮಾರ್ಗ. ಮೌಲ್ಯಮಾಪನದಲ್ಲಿ ಪ್ರಮಾದವಶಾತ್ ಸಂಭವಿಸುವ ತಪ್ಪುಗಳಿಗೆ ಆಯಾ ಮೌಲ್ಯಮಾಪಕರನ್ನು ಹೊಣೆ ಮಾಡಿ ಅವರಿಗೆ `ದಂಡ~ವನ್ನು ವಿಧಿಸಿ ವಸೂಲು ಮಾಡಲಾಗುತ್ತಿದೆ.

ಅನುಭವಿ ಮೌಲ್ಯ ಮಾಪಕರಿಂದ ಮರುಮೌಲ್ಯಮಾಪನ ಮಾಡಿಸುವ ಪರೀಕ್ಷಾ ಮಂಡಳಿ (ಎಸ್ಸೆಸ್ಸೆಲ್ಸಿ)ಯ ಕ್ರಮವೂ ಸರಿಯಲ್ಲ. ಮೌಲ್ಯಮಾಪನಕ್ಕೆ ಆಯ್ಕೆ ಮಾಡುವಾಗಲೇ ಶಿಕ್ಷಕರ ಅನುಭವ ಹಾಗೂ ಅರ್ಹತೆ ಗಮನಕ್ಕೆ ತೆಗೆದುಕೊಂಡಿರುತ್ತಾರೆ.
 
ಮೌಲ್ಯಮಾಪನ ಸರಿಯಾಗಿ ಆಗಿಲ್ಲವೆಂದು ಕಂಡುಬಂದರೆ ಮೂಲ ಮೌಲ್ಯಮಾಪಕರಿಂದಲೇ ಲೋಪ ಸರಿಪಡಿಸಬೇಕೇ ವಿನಃ ಬೇರೊಬ್ಬರಿಂದ ಮೌಲ್ಯಮಾಪನ ಮಾಡಿಸುವುದು ಸರಿಯಲ್ಲ.

ಭಾಷಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಲೋಪಗಳಾಗುವುದು ಸಹಜ. ಪ್ರಬಂಧ, ಗಾದೆ ಮಾತುಗಳು, ಪತ್ರ, ಸಂಕ್ಷಿಪ್ತ ಉತ್ತರ ಇತ್ಯಾದಿಗಳಿಗೆ ಅಂಕ ನಿರ್ಣಯ ಸುಲಭವಲ್ಲ, ವಸ್ತು ಒಂದೇ ಆಗಿದ್ದರೂ ವಿದ್ಯಾರ್ಥಿಗಳ ಶೈಲಿಯಿಂದ ಉತ್ತರಗಳು ಭಿನ್ನವಾಗುತ್ತದೆ.
 
ವಿಷಯ, ಭಾಷಾ ಶುದ್ಧತೆ ಗಮನಿಸಿ ಅಂಕ ನೀಡಬೇಕಾಗುತ್ತದೆ. ಕೆಲವರು ಇವನ್ನೆಲ್ಲ ಪರಿಗಣಿಸದೇ ಅಂಕ ನೀಡುತ್ತಾರೆ. ಇದರಿಂದ ಅಂಕಗಳಲ್ಲಿ ಅಲ್ಪ ವ್ಯತ್ಯಾಸ ಆಗುತ್ತದೆ. ಅದನ್ನು   ಮೌಲ್ಯಮಾಪನದ ಲೋಪ ಎಂದು ಪರಿಗಣಿಸಬಾರದು.

ಪರೀಕ್ಷಾ ಮಂಡಳಿ `ಅಪರಾಧಿ ಮೌಲ್ಯಮಾಪಕ~ರಿಗೆ ದಂಡ ಶುಲ್ಕ ವಿಧಿಸಿ ಪಾವತಿ ಮಾಡುವಂತೆ ಆದೇಶ ನೀಡುತ್ತದೆ.  ಅಂಕಗಳ ವ್ಯತ್ಯಾಸವಾಗಿದೆ ಎಂಬುದರ ಹೊರತು ತಪ್ಪಿನ ಸ್ವರೂಪವನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಏನು ತಪ್ಪಾಗಿದೆ ಎಂಬುದನ್ನು ತಿಳಿಸದೆ ದಂಡ ಕಟ್ಟುವಂತೆ ಒತ್ತಾಯಿಸುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.