ADVERTISEMENT

ಯಾರು ಸಾಚಾಗಳು ಇವರೊಳಗೆ

ಕೆ.ಎನ್.ಭಗವಾನ್
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಸಾಮಾಜಿಕ ಕಾರ್ಯಕರ್ತ ಕೇಜ್ರಿವಾಲ್ ಇದೀಗ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಾ ವಾಗ್ದಾಳಿ ನಡೆಸುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಪ್ರತಿಯೊಬ್ಬರೂ ವ್ಯಾಪಾರ ಮಾಡಿ ಆದಷ್ಟು ಬೇಗ ಆದಷ್ಟು ಹೆಚ್ಚು ಹಣ ಮಾಡಲು ಹವಣಿಸುತ್ತಾರೆ.

ಯಾರೂ ತನ್ನ ಮನೆ ಮಠ ಮಾರಿ ಹಣವನ್ನು ವ್ಯಾಪಾರದಲ್ಲಿ ತೊಡಗಿಸುವುದಿಲ್ಲ. ಮನೆ ಕಟ್ಟಬೇಕಾದರೂ ಶೇ 80 ರಷ್ಟು ಹಣವನ್ನು ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳುತ್ತಾರೆ. ಧೀರೂಬಾಯಿ ಅಂಬಾನಿ ಕಾರ್ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು. 30 ವರ್ಷಗಳಲ್ಲಿ ಅವರ ಮಗ ಮುಖೇಶ್ ಅಂಬಾನಿ ದೇಶದಲ್ಲೇ ಅತಿ ಹೆಚ್ಚು ಶ್ರೀಮಂತನಾದ.

ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಿದ್ದವರು ಈಗ ಹೇಗಾಗಿದ್ದಾರೆ ನೋಡಿ. ಪೊಲೀಸ್ ಪೇದೆಗಳ ಮಕ್ಕಳಾದ ರೆಡ್ಡಿ ಮತ್ತು ಕಟ್ಟಾ ಕೋಟ್ಯಧೀಶರಾಗಿದ್ದು ಹೇಗೆ? ಸಂಘ ಪ್ರಚಾರಕರಾಗಿದ್ದ ಹಲವಾರು ಮಂದಿ ಚುನಾವಣೆಯಲ್ಲಿ ಗೆದ್ದು ಕೋಟ್ಯಧೀಶರಾಗಿಲ್ಲವೆ?
 
ಯಾರಾದರೂ ಹಣ ಕಳೆದುಕೊಳ್ಳಲು ವ್ಯಾಪಾರಕ್ಕೆ ಇಳಿಯುತ್ತಾರೆಯೇ ದೊಡ್ಡ ಉದ್ದಿಮೆದಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೂ ಕೂಡ ಸಾರ್ವಜನಿಕರೂ ಷೇರುಗಳನ್ನು ಕೊಳ್ಳುವುದಕ್ಕೆ ಪ್ರೇರೇಪಿಸುವುದು ಏತಕ್ಕಾಗಿ?
 
ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಹೆಸರಿನಲ್ಲಿ ಟ್ರಸ್ಟ್ ಮಾಡಿ ನೂರಾರು ಎಕರೆ ಜಮೀನನ್ನು ಮಧ್ಯಪ್ರದೇಶ ಸರ್ಕಾರದಿಂದ ಅತಿ ಕಡಿಮೆ ಬೆಲೆಗೆ ಪಡೆದರೂ ಕೋರ್ಟ್ ಆದೇಶ ಮೇಲೆ ವಾಪಸು ಮಾಡಬೇಕಾಯಿತಲ್ಲವೇ?

ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಮಳಿಗೆ (ಆರ್.ಬಿ.ಐ. ಎದುರು) ಜಾಗವನ್ನು ವರ್ಷಕ್ಕೆ 100 ರೂಪಾಯಿಗೆ ಪಡೆದು ಈಗ ತಿಂಗಳಿಗೆ 2 ಕೋಟಿ ರೂಪಾಯಿಗಿಂತ ಹೆಚ್ಚಾಗಿ ಬಾಡಿಗೆಯನ್ನು ಪಡೆಯುತ್ತಿಲ್ಲವೇ?
 
ಎನ್.ಡಿ.ಎ. ಸರ್ಕಾರ ಇದ್ದಾಗ ಸ್ವದೇಶಿ ಜಾಗರಣ ಮಂಚ್ ತನ್ನ 3000 ರೂಪಾಯಿ ಬ್ಯಾಂಕ್ ಹಣದಿಂದ 3 ಕೋಟಿ ರೂಪಾಯಿಗೆ ಏರಿಸಲು ದೆಹಲಿಯ ಪ್ರಗತಿ ಮೈದಾನದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ನಡೆಸಲಿಲ್ಲವೇ?

ಅಷ್ಟೇಕೆ, ದೆಹಲಿಯಲ್ಲಿನ ಪ್ರತಿಷ್ಠಿತ ಜಾಗಗಳನ್ನು ಸಂಘ ಪರಿವಾರ ಅತಿ ಕಡಿಮೆ ಬೆಲೆಗೆ ಪಡೆದುಕೊಳ್ಳಲಿಲ್ಲವೆ? ಇದು ಭಾರತದಲ್ಲಿ ಹೊಸದೇ? ಇವರಲ್ಲಿ ಸಾಚಾಗಳು ಯಾರು ಎಂದು ಸಾರ್ವಜನಿಕರೇ ತೀರ್ಮಾನ ಮಾಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.