ADVERTISEMENT

ರೈತರ ಅಭಿಪ್ರಾಯ ಅತಿಮುಖ್ಯ

ಮಂಜುನಾಥ ಹೊಳಲು
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ವರ್ಷದಿಂದ ವರ್ಷಕ್ಕೆ ಕಾವೇರಿಯ ಸಮಸ್ಯೆ ಅಧಿಕವಾಗುತ್ತಿದೆ. ಯಾವುದೇ ಸರ್ಕಾರ ಬಂದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಫಲವಾಗಿವೆ. ಎಲ್ಲಾ ರಾಜಕೀಯ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ.

ಕೆಲವರು ಮುಖ್ಯಮಂತ್ರಿಯ ರಾಜೀನಾಮೆ ಕೇಳಿದರೆ, ಇನ್ನೂ ಕೆಲವರು ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಇನ್ನೂ ಹಲವಾರು ಸಂಘಟನೆಗಳು ತಮಿಳುನಾಡು ವಿರುದ್ಧ ಯುದ್ಧ ಸಾರಿವೆ.

ಹೋರಾಟದ ದಿಕ್ಕು ಬದಲಾಗಬೇಕಿದೆ ಮತ್ತು ರಾಜಕೀಯ ಮುತ್ಸದ್ಧಿಗಳು ಪ್ರಬುದ್ಧ ನಿರ್ಣಯ ತೆಗೆದುಕೊಳ್ಳಬೇಕಿದೆ. ಕಳೆದ 21 ವರ್ಷದಿಂದ ರಾಜ್ಯ ಸರ್ಕಾರ ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಕಾವೇರಿ ಹೋರಾಟಕ್ಕೆ ವಿನಿಯೋಗ ಮಾಡಿದೆ. ಇದು ಖಂಡನೀಯ. 
 
ಕಾವೇರಿ ನದಿ ವಿಚಾರವಾಗಿ ಕಾನೂನು ಮೊರೆ ಹೋಗಬೇಕು ನಿಜ, ಆದರೆ ಕಾವೇರಿ ಅಚ್ಚುಕಟ್ಟಿನಲ್ಲಿ ವಾಸಿಸುವ ಜನರ ಅಭಿಪ್ರಾಯ ಸಂಗ್ರಹಿಸದೇ ಕಾವೇರಿ ನದಿ ಪ್ರಾಧಿಕಾರ ಮೊರೆ ಹೋಗಬಾರದು. ಎರಡು ರಾಜ್ಯಗಳ ರೈತರ ಅಭಿಪ್ರಾಯ ಅತಿಮುಖ್ಯ.
ಈಗಿರುವ ಕಾವೇರಿ ನದಿ ಪ್ರಾಧಿಕಾರದ ಸದಸ್ಯರು ಬದಲಾಗಬೇಕು. 

ಈ ಪ್ರಾಧಿಕಾರಕ್ಕೆ ಎರಡು ರಾಜ್ಯಗಳ ರೈತರೇ ಸದಸ್ಯರಾಗಬೇಕು. ಅವರಲ್ಲಿ ಒಬ್ಬರನ್ನ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಬೇಕು. ಕಾವೇರಿ ನದಿ ಪ್ರಾಧಿಕಾರಕ್ಕೆ ದೇಶದ ಪ್ರಧಾನಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ  ಅವರು ಕಾವೇರಿ ವಿಷಯವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಾರೆ.  ಕಾವೇರಿ ನದಿ ಪ್ರಾಧಿಕಾರ ಅಧ್ಯಕ್ಷತೆಯನ್ನು ಬದಲಾಯಿಸಬೇಕು.

ಪ್ರೊ ನಂಜುಂಡಸ್ವಾಮಿಯವರ ಕಾಲದಿಂದಲೂ ಕರ್ನಾಟಕ ರೈತ ಸಂಘ ಹಾಗು ತಮಿಳುನಾಡು ರೈತ ಸಂಘ ಒಳ್ಳೆ ಸಂಬಂಧ ಹೊಂದಿವೆ. ಜಂಟಿಯಾಗಿ ರೈತಪರ ಕೆಲಸಗಳನ್ನು ಮಾಡಿಕೊಂಡು ಬಂದಿವೆ.

ADVERTISEMENT

ಅದಕ್ಕೂ ಹೊರತಾಗಿ ದಕ್ಷಿಣ ಭಾರತದ (ಆಂಧ್ರ, ಕೇರಳ, ತಮಿಳುನಾಡು ಹಾಗೂ ಕರ್ನಾಟಕ) ರಾಜ್ಯದ ರೈತ ಸಂಘಟನೆಗಳು ಒಂದು ದೊಡ್ಡ ಒಕ್ಕೂಟ ಮಾಡಿಕೊಂಡಿವೆ.  ಹಾಗಾಗಿ ಕಾವೇರಿ ನದಿ ಪ್ರಾಧಿಕಾರಕ್ಕೆ ಎರಡು ರಾಜ್ಯದ ರೈತ ಸಂಘಟನೆಯವರು ಸದಸ್ಯರಾಗಬೇಕು ಹಾಗೂ  ಅವರ ಅಧ್ಯಕ್ಷತೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಅವರಿಬ್ಬರ ನಡುವೆ ಜಗಳವಾದಾಗ ಕೋರ್ಟ್ ಮೊರೆಹೋಗಬೇಕು.

ಇಲ್ಲವಾದರೆ, ಎರಡೂ ರಾಜ್ಯಗಳಲ್ಲಿ ಕಾವೇರಿ ಹಿತ ರಕ್ಷಣಾ ವೇದಿಕೆ ಚಾಲ್ತಿಯಲ್ಲಿದ್ದೂ ಅವರುಗಳ ಅಧ್ಯಕ್ಷತೆಯಲ್ಲಿ ಕಾವೇರಿ ನದಿ ವಿಚಾರವಾಗಿ ನಿರ್ಣಯ ತೆಗೆದುಕೊಳ್ಳಲು ಕಾನೂನು ಅನುವು ಮಾಡಿಕೊಡಬೇಕು. ದಕ್ಷಿಣ ಭಾರತಕ್ಕೆ ಕಾವೇರಿ ಜೀವನದಿ. ಅದನ್ನು  ರಾಜಕೀಯ ದಾಳವಾಗಿ ಮಾಡಿಕೊಡಲು ಅನುವು ಮಾಡಿಕೊಡಬಾರದು.  ಜನರ ಕೈಗೆ ಅಧಿಕಾರ ಮತ್ತು ಜವಾಬ್ದಾರಿ ಕೊಡುವುದು ಶಾಶ್ವತ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.