ನನ್ನ ಮೇಲೆ ವಾಮಾಚಾರ ಪ್ರಯೋಗಿಸಿದ್ದಾರೆ. ಇದರಿಂದ ನನಗೆ ಜೀವಭಯ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆತಂಕ ವ್ಯಕ್ತಪಡಿಸಿರುವುದು ವೈಚಾರಿಕ ಪ್ರಜ್ಞೆಯುಳ್ಳವರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ತಮ್ಮ ವೈಯಕ್ತಿಕ ನಂಬಿಕೆಗಳು, ಭಯ ಆತಂಕಗಳು ಏನಾದರೂ ಇರಲಿ, ಹೀಗೆ ಬಹಿರಂಗವಾಗಿ ಹೇಳಿಕೆ ನೀಡುವುದು ನಿಜಕ್ಕೂ ಸರಿಯಲ್ಲ.
ವೈಚಾರಿಕ ಜಾಗೃತಿಗೆ ಪ್ರಯತ್ನಿಸುವ ಕಾಳಜಿಯುಳ್ಳವರ ಪರವಾಗಿ ನಾನು ಅವರಿಗೆ ಏನೂ ಆಗುವುದಿಲ್ಲ ಎಂದು ಅಭಯ ನೀಡುತ್ತಿದ್ದೇನೆ. ಅಷ್ಟಕ್ಕೂ ಅದು ಪವರ್ಫುಲ್ ವಾಮಾಚಾರವಾಗಿದ್ದರೆ ಅದನ್ನು ನಮ್ಮ ಕಡೆಗೆ ತಿರುಗಿಸಿಕೊಳ್ಳುತ್ತೇನೆ. ಏಕೆಂದರೆ ಇಂತಹ ಎಷ್ಟೋ ವಾಮಾಚಾರ ಪ್ರಕರಣಗಳ ವೈಜ್ಞಾನಿಕ ಹಿನ್ನೆಲೆಯನ್ನು ರಾಜ್ಯದಾದ್ಯಂತ ವಿವರಿಸುತ್ತಾ ಬಂದಿದ್ದೇನೆ. ಎಷ್ಟೋ ಮಾಟ ಮಂತ್ರಗಳ ನಿಂಬೆಹಣ್ಣು ಮತ್ತು ಕುಡಿಕೆಗಳನ್ನು ನೆಲದಿಂದ ಬರಿಗೈಯಲ್ಲಿ ಕಿತ್ತೆಸೆದಿದ್ದೇನೆ.
ರುದ್ರಭೂಮಿಯಲ್ಲಿ ಇಡೀ ರಾತ್ರಿ ಸಜೀವ ಸಮಾಧಿಯಾಗಿದ್ದೇನೆ. ಅಷ್ಟಾದರೂ ಯಾವುದೇ ದೆವ್ವ, ಭೂತ, ಪ್ರೇತ ಇತ್ಯಾದಿಗಳು ನನ್ನನ್ನು ಕಾಡಿಲ್ಲ. ಮುಖ್ಯಮಂತ್ರಿಗಳು ಸ್ವಲ್ಪ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಲಿ. ಅವರಿಗೆ ವೈಚಾರಿಕ ಪ್ರಜ್ಞೆಯನ್ನು ಸಾಬೀತುಪಡಿಸಲು ಇದೇ ಸಕಾಲ ಎನ್ನುವುದನ್ನು ಗಮನಿಸಲಿ. ಇಲ್ಲಿಯವರೆಗೂ ಜನಸಾಮಾನ್ಯರ ಮನೆಯ ಅಂಗಳದಲ್ಲಿ ಮಾತ್ರ ಇದ್ದ ವಾಮಾಚಾರ ಇದೀಗ ವಿಧಾನಸೌಧದಿಂದ ಆರಂಭಗೊಂಡು ಪಂಚಾಯಿತಿ, ಶಾಲೆಗಳಿಗೂ ವಿಸ್ತರಿಸಿದೆ.
ವಾಮಾಚಾರದಿಂದ ತಮಗಾಗದವರನ್ನು ಕೊಲ್ಲಲು ಸಾಧ್ಯವಾದರೆ ವಿಐಪಿಗಳಿಗೆ ನೀಡಲಾಗುವ ಝಡ್ ದರ್ಜೆ ಭದ್ರತೆ ಪ್ರಯೋಜನವಿಲ್ಲ. ಇಷ್ಟನ್ನು ಯೋಚಿಸಿದರೆ ಭಯೋತ್ಪಾದಕರನ್ನೂ ವಾಮಾಚಾರದಿಂದ ಮುಗಿಸಬಹುದಲ್ಲವೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.