ADVERTISEMENT

ವಿ.ವಿ ವಿವಾದದ ಕೇಂದ್ರವಾಗದಿರಲಿ

ಅಡವಿಸ್ವಾಮಿ, ಬಳ್ಳಾರಿ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ನಾಡಿನ ದೊರೆ ಶ್ರಿಕೃಷ್ಣದೇವರಾಯನ ಹೆಸರಿನ ವಿಶ್ವವಿದ್ಯಾಲಯ ಬಳ್ಳಾರಿಯಲ್ಲಿರುವುದು ಹೆಮ್ಮೆಯ ಸಂಗತಿ. ಆದರೆ ವಿದ್ಯೆ ನೀಡುವ ವಿಶ್ವವಿದ್ಯಾಲಯ ಇಂದು ವಿವಾದಾತ್ಮಕ ವಿಶ್ವವಿದ್ಯಾಲಯ ಆಗಿರುವುದು ಬಳ್ಳಾರಿ ಜನತೆಗೆ ಅವಮಾನಕರ ಸಂಗತಿ. ತಮ್ಮ ವೈಯಕ್ತಿಕ ಲಾಭಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಶ್ವವಿದ್ಯಾಲಯವನ್ನು ಬಳಸಿಕೊಳ್ಳಲು ಯತ್ನಿಸುತ್ತಿರುವ ಕೆಲವರು ವಿವಿಯ ಬಗ್ಗೆ ಗೌರವ, ಕಾಳಜಿ ಹೊಂದಿರುವಂತೆ ಕಾಣುತ್ತಿಲ್ಲ. ಇಂದು ವಿವಿಯ ಮಾನ ಬೀದಿಗೆ ಬಿದ್ದು ಹರಾಜಾಗುತ್ತಿರುವುದಕ್ಕೆ ಸ್ಥಳೀಯರ ಬೇಜವಾಬ್ದಾರಿಯೇ ಮುಖ್ಯ ಕಾರಣ.

ವಿವಿಯಲ್ಲಿ ಇಂದು ವಿವಾದಗಳು ತಾರಕಕ್ಕೇರಿ, ಅಧಿಕಾರಕ್ಕಾಗಿ ರಾಜಕೀಯ ನಾಯಕರಂತೆ ಕಿತ್ತಾಟಗಳು ನಡೆದು `ಜ್ಞಾನಸಾಗರದಲ್ಲಿ ಅಜ್ಞಾನಿಗಳ ಕಿತ್ತಾಟ ನೋಡಯ್ಯ' ಎನ್ನುವ ಸ್ಥಿತಿ ಉಂಟಾಗಿದೆ. ಉನ್ನತ ಮಟ್ಟದ ಶಿಕ್ಷಣ ನೀಡುವ ಸುಶಿಕ್ಷಿತರೆನಿಸಿರುವವರು ಇರಬೇಕಾದ ನೆಲದಲ್ಲಿ ಜಾತಿನಿಂದನೆ ಪ್ರಕರಣಗಳು, ಸಾವಿರಾರು ವಿದ್ಯಾರ್ಥಿಗಳು ನಿಷ್ಕಲ್ಮಶವಾಗಿ ಉನ್ನತ ವಿದ್ಯೆಯೊಂದಿಗೆ ಹೊರಬರಬೇಕಾದ ಸ್ಥಳದಲ್ಲಿ ನೌಕರ ವರ್ಗದಲ್ಲಿ ನಿರ್ಮಾಣವಾಗುತ್ತಿರುವ ಜಾತಿ ಸಂಘಟನೆಗಳು, ಬೋಧಿಸಬೇಕಾದ ಬಾಯಲ್ಲಿ ಸ್ವಜಾತಿ ವ್ಯಾಮೋಹದ ಮಾತುಗಳು ಕೇಳಿಬರುತ್ತಿವೆ. ಅಸಲಿಗೆ ಸರ್ಕಾರದಿಂದ ಸಂಬಳ ಪಡೆಯುತ್ತಿರುವ ಇವರಿಗೆ ಜಾತಿ ಹೆಸರಿನಲ್ಲಿ ಸಂಘಟನೆ ಕಟ್ಟಲು ಅನುಮತಿ ನೀಡಿದವರು ಯಾರು? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.