ಈ ಸಾರಿಯ ‘ವಿಶ್ವ ನುಡಿಸಿರಿ’ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದರ ಬಗ್ಗೆ ಓದುಗರೊಬ್ಬರ ಪ್ರತಿಕ್ರಿಯೆ ಓದಿದೆ. ಅದಕ್ಕೆ ನನ್ನ ಸ್ಪಷ್ಟನೆ ಹೀಗಿದೆ: ನಾನು ಮೊದಲ ನುಡಿಸಿರಿಯ ಅಧ್ಯಕ್ಷನಾಗಿದ್ದೆ. ವಿಶ್ವನುಡಿಸಿರಿಯಲ್ಲಿ ಹಿಂದಿನ ಎಲ್ಲ ಅಧ್ಯಕ್ಷರೂ ಉಪಸ್ಥಿತರಿರಬೇಕೆಂಬ ಆಶಯಕ್ಕೆ ನಾನು ಕೊನೇ ಗಳಿಗೆಯಲ್ಲಿ ಒಪ್ಪಿ ಹೋದೆ.
‘ಸಮಾಜ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲು ಒತ್ತಾಯಿಸಿದ್ದರೂ ನಾನು ಒಪ್ಪಿರಲಿಲ್ಲ. ಒಪ್ಪಬಹುದೆಂಬ ಭಾವನೆಯಿಂದ ಅವರು ಕೆಲವು ಆಹ್ವಾನ ಪತ್ರಿಕೆಗಳಲ್ಲಿ ನನ್ನ ಹೆಸರು ಅಚ್ಚು ಮಾಡಿ ಆನಂತರ ಬೇರೆ ಆಹ್ವಾನ ಪತ್ರಿಕೆ ಮಾಡಿಸಿದ್ದಾರೆಂದು ತಿಳಿಯಿತು. ನನ್ನನ್ನು ಕೇಳಿದ ವರದಿಗಾರರಿಗೆ ಇದೇ ವಿಷಯವನ್ನು ಸ್ಪಷ್ಟಪಡಿಸಿದೆ.
ಈ ಸಾರಿಯ ನುಡಿಸಿರಿಯ ಬಗ್ಗೆ ನನ್ನ ಅಭಿಪ್ರಾಯ ಕೇಳಿದಾಗ ತಾತ್ವಿಕ ವಿರೋಧದ ಅಂಶಗಳನ್ನು ಹೇಳಿದೆ. ಆ ಭಾಗದ ಹತ್ಯೆ, ಅತ್ಯಾಚಾರಗಳ ಬಗ್ಗೆಯೂ ಪ್ರಸ್ತಾಪಿಸಿ ಖಂಡಿಸಿದೆ. ಮೊದಲ ನುಡಿಸಿರಿಯ ಅಧ್ಯಕ್ಷನಾಗಿದ್ದರಿಂದ ನಾಲ್ಕು ಮಾತಾಡುವ ಅವಕಾಶವಿರಬಹುದೆಂಬ ಪರೋಕ್ಷ ಸೂಚನೆಯನ್ನು ಕೆಲವರು ಕೊಟ್ಟಿದ್ದರಿಂದ, ಒಂದು ವೇಳೆ ಅವಕಾಶ ಸಿಕ್ಕಿದ್ದರೆ ಮುಖ್ಯವೇದಿಕೆಯಲ್ಲೇ ಈ ಎಲ್ಲ ವಿಷಯ ಪ್ರಸ್ತಾಪಿಸುತ್ತಿದ್ದೆನೆಂದು ಹೇಳಿದೆ.
ವರದಿಯಲ್ಲಿ ಉಪನ್ಯಾಸಕ್ಕೂ ಗೈರುಹಾಜರಿಗೂ ಸಂಬಂಧವಿರುವಂತೆ ಬಂದಿದ್ದರಿಂದ ಪ್ರಶ್ನೆಗಳು ಎದುರಾಗಿವೆ. ನಮಗೆ ತಾತ್ವಿಕವಾಗಿ ಒಪ್ಪಿಗೆಯಾಗದ ವೇದಿಕೆಗಳಿಗೂ ಹೋಗಿ ನಮ್ಮ ವಿಚಾರಗಳನ್ನು ಹೇಳಬೇಕೇ ಬೇಡವೆ ಎಂಬುದೊಂದು ಚರ್ಚೆಯ ವಿಷಯ. ಆದರೆ ವಿಶ್ವನುಡಿಸಿರಿಯ ‘ವೈಭವ’ದಲ್ಲಿ ‘ವಿವೇಕ’ ಹಿಂದೆ ಸರಿದಿದೆಯೆಂದು ನನಗೆ ಅನ್ನಿಸಿದ್ದು ನಿಜ.
ಆರಂಭದ ನುಡಿಸಿರಿಗಳಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ನನ್ನ ಆತ್ಮಾವಲೋಕನಕ್ಕೆ ಕಾರಣವಾಯಿತು. ಹೀಗಾಗಿ, ಪೂರ್ವ ಸೂಚನೆಯಿಲ್ಲದೆ ಸನ್ಮಾನದ ಸಂದರ್ಭದಲ್ಲಿ ಕೊಟ್ಟ ಹಣವನ್ನು ವಾಪಸ್ ಮಾಡುವುದಾಗಿ ಸಂಘಟಕರಿಗೆ ತಿಳಿಸಿ, ದಾಖಲೆಗೆಂದು ಚೆಕ್ ಮೂಲಕವೇ ಕಳಿಸಿದ್ದೇನೆ (ಚೆಕ್ ನಂ. 156905).
ಇದು ನುಡಿಸಿರಿಯ ಬಗೆಗಿನ ಸ್ಪಷ್ಟನೆಯಾದರೆ, ಇದೇ ಓದುಗರು ಎತ್ತಿರುವ ದಸರಾ ಉದ್ಘಾಟನೆಯ ವಿಷಯವನ್ನು ಅನಗತ್ಯ ಆಕ್ಷೇಪ ಎನ್ನಬೇಕಾಗಿದೆ. ನಾನು ಹಿಂಬದಿಯಿಂದ ವೇದಿಕೆಗೆ ಬಂದು ದಸರಾ ಉದ್ಘಾಟನೆ ಮಾಡಿದೆ ಎನ್ನುವುದು ಅವಿವೇಕದ ಆರೋಪ. ಸರ್ಕಾರ ನಡೆಸುವ ಉದ್ಘಾಟನಾ ಸಮಾರಂಭವು ಸಂವಿಧಾನಾತ್ಮಕ ಆಶಯಕ್ಕನುಗುಣವಾಗಿ ನಡೆಯಬೇಕೆಂಬ ನಿಬಂಧನೆ ತಿಳಿಸಿಯೇ ನಾನು ನೇರವಾಗಿ ವೇದಿಕೆಗೆ ಬಂದು ಉದ್ಘಾಟನೆ ಮಾಡಿದೆ.
ಲಿಖಿತ ಭಾಷಣವನ್ನು ಹಂಚಿದೆ. ಸಂವಿಧಾನಾತ್ಮಕ ಆಶಯಕ್ಕೆ ಬದ್ಧವಾಗಿರುವುದೇ ತಪ್ಪೆ? ಇನ್ನು ಬೆಂಗಳೂರಿನ ಸಮಾರಂಭದಲ್ಲಿ ಆಡಿದ ನನ್ನ ಮಾತನ್ನು ಇಲ್ಲಿ ಎಳೆತಂದು ವ್ಯಂಗ್ಯ ಮಾಡಿರುವುದನ್ನು ಅರ್ಥಮಾಡಿಕೊಳ್ಳಬಲ್ಲೆ!
ಇಷ್ಟಾಗಿಯೂ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ: ‘ವಿಶ್ವ ನುಡಿಸಿರಿ’ಯ ಭಾಗವಹಿಸುವಿಕೆಯಿಂದ ಹಿಡಿದು ಯಾವುದೇ ಸಂಗತಿಯ ಬಗ್ಗೆ ನಾನು ಆತ್ಮಾವಲೋಕನ ಮಾಡಿಕೊಳ್ಳಲು, ತಪ್ಪಾಗಿದ್ದರೆ ತಿದ್ದಿಕೊಳ್ಳಲು ಹಿಂಜರಿಯುವುದಿಲ್ಲ; ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಉದ್ದೇಶಪೂರ್ವಕವಾಗಿ ಕಾಲೆಳೆಯುವವರಿಗೆ ಅಳುಕುವುದೂ ಇಲ್ಲ.
– ಬರಗೂರು ರಾಮಚಂದ್ರಪ್ಪ,ಬೆಂಗಳೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.