ADVERTISEMENT

ವೈದ್ಯರ ಬೆದರಿಕೆಗೆ ಮಣಿಯದಿರಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ರಾಜ್ಯದಲ್ಲಿನ ಸರ್ಕಾರಿ ವೈದ್ಯರ ಗಾಂಧಿಗಿರಿ ಹೋರಾಟ ಮಾದರಿಯಲ್ಲಿನ `ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ ಆದರೂ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಕರ್ತವ್ಯ ನಿರ್ವಹಿಸುತ್ತಿದ್ದೇವೆ~ ಎನ್ನುವ ಬ್ಲಾಕ್ ಮೇಲ್ - ಬೇಡಿಕೆಗೆ ಸರ್ಕಾರ ಮಣಿಯಬಾರದು ಏಕೆಂದರೆ:

1) ಒಂದು ಹುದ್ದೆಗೆ ಯಾವುದೇ ಸರ್ಕಾರಿ ನೌಕರ ರಾಜೀನಾಮೆ ನೀಡಲು ಅನುಸರಿಸಬೇಕಾದ ಕ್ರಮವನ್ನು ಇವರು ಅನುಸರಿಸಿಲ್ಲ ಮತ್ತು ಅನುಸರಿಸುವುದೂ ಇಲ್ಲ. ಕೇವಲ ಪ್ರತಿ ಜಿಲ್ಲೆಯಲ್ಲಿನ ಇಂತಿಷ್ಟು ವೈದ್ಯರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಪತ್ರಿಕೆಗಳಲ್ಲಿ ಭೋಂಗು ಬಿಡುತ್ತಾರೆ.

ನಿಜಾಂಶವೇನೆಂದರೆ ನಾವು ಕೊಟ್ಟಂತೆ ಮಾಡುತ್ತೇವೆ. ನೀವು ಇಟ್ಟುಕೊಂಡಂತೆ ಮಾಡಿ ಎನ್ನುವ ಒಳ ಒಪ್ಪಂದ ಈ ವೈದ್ಯರ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳದ್ದಾಗಿರುತ್ತದೆ.

2) ಉಚ್ಚ ನ್ಯಾಯಾಲಯ ಸರ್ಕಾರಿ ವೈದ್ಯರುಗಳಿಗೆ ಮುಷ್ಕರ ಮಾಡುವ ಹಕ್ಕಿಲ್ಲ ಎಂದು ಯಾವತ್ತು ತಪರಾಕಿ ಕೊಟ್ಟಿತೋ ಅಂದಿನಿಂದ ಈ ಜಾಣರು ಕಂಡುಕೊಂಡ ಮಾರ್ಗ ಈ ರಾಜೀನಾಮೆ ನಾಟಕ/ ಬ್ಲಾಕ್ ಮೇಲ್ ತಂತ್ರ.

 3) ಇವರಿಗೆ ಪ್ರಸ್ತುತ ಸಿಕ್ಕುತ್ತಿರುವ ವೇತನ, ಸೌಲಭ್ಯ, ಅಧಿಕಾರ ವ್ಯಾಪ್ತಿಗಳು ಇದೇ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನ್ಯ ಸರ್ಕಾರಿ ನೌಕರರಿಗೆ ಸಿಕ್ಕುತ್ತಿಲ್ಲ. ಉದಾಹರಣೆಗೆ ತಹಶೀಲ್ದಾರ್ ಹುದ್ದೆಯನ್ನು ತೆಗೆದು ಕೊಳ್ಳಬಹುದು. ಆದಾಗ್ಯೂ ಈ ವೈದ್ಯರುಗಳು ಪದೇ ಪದೇ ಸಾಮೂಹಿಕ ರಾಜೀನಾಮೆ ಬೆದರಿಕೆಗಳಿಂದ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿರುವುದು ಖಂಡನೀಯ.

4) ಬಹುತೇಕ ಸರ್ಕಾರಿ ಸೇವೆಯಲ್ಲಿರುವ ವೈದ್ಯರು ಖಾಸಗಿ ರಂಗದ ಪೈಪೋಟಿಗೆ ನಿಲ್ಲಲಾಗದೆ ಇಲ್ಲಾ ಉನ್ನತ ವಿದ್ಯಾರ್ಹತೆ (ಎಂ.ಡಿ.) ಗಿಟ್ಟಸಲಾಗದೆ, ಎ್ಲ್ಲಲೂ ಸಲ್ಲದವ ಸರ್ಕಾರಿ ನೌಕರಿಗೆ ಸಲ್ಲುತ್ತಾನೆ ಎನ್ನುವ ಗಾದೆಯಂತೆ ಬಂದು ಸೇರಿದವರಿದ್ದಾರೆ.

ಅಷ್ಟಕ್ಕೂ ಇವರುಗಳು ತಮ್ಮ ಸೇವೆಯನ್ನು ಕನಿಷ್ಠ ಮಟ್ಟದಲ್ಲಿ ಮಾಡಿದ್ದರೂ ಇವತ್ತು ನಾಯಿ ಕೊಡೆಗಳಂತೆ ಇರುವ ಖಾಸಗಿ ಕ್ಲಿನಿಕ್‌ಗಳು, ಆಸ್ಪತ್ರೆಗಳು, ನರ್ಸಿಂಗ್‌ಹೋಂಗಳು ಭರ್ಜರಿಯಾಗಿ ನಡೆಯುತ್ತಿರಲಿಲ್ಲ.

5) ಅಷ್ಟಕ್ಕೂ ರಾಜ್ಯದಲ್ಲಿನ ಯಾವುದೇ ಸರ್ಕಾರಿ ಆಸ್ಪತ್ರೆಗಳ್ಲ್ಲಲೂ ಯಾವ ಚಿಕಿತ್ಸೆಗಳೂ ಉಚಿತವಾಗಿ ದೊರೆಯುವುದಿಲ್ಲವೆಂಬ ಸತ್ಯ ರಾಜ್ಯದ ಜನತೆಗೆ ಬಲು ಚೆನ್ನಾಗಿ ಗೊತ್ತು.

ಹೀಗಾಗಿ ಈ ಮೇಲ್ಕಂಡ ಕಾರಣಗಳಿಂದ ರಾಜ್ಯ ಸರ್ಕಾರಿ ವೈದ್ಯ ನೌಕರರ ಸಂಘದ ಹೆಸರಲ್ಲಿ ಈ ವೈದ್ಯರು ನಡೆಸುತ್ತಿರುವ ಈ ರಾಜೀನಾಮೆ - ಬ್ಲಾಕ್ ಮೇಲ್ ತಂತ್ರಕ್ಕೆ ರಾಜ್ಯ ಸರ್ಕಾರ ಮಣಿಯದೆ ಎಲ್ಲಾ ಸರ್ಕಾರಿ ನೌಕರರಂತೆ ಇವರನ್ನು ಸಮಾನವಾಗಿ ಕಾಣಲು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.