ADVERTISEMENT

ವೈಯಕ್ತಿಕ ಪ್ರತಿಷ್ಠೆಯಾಗಬಾರದು

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಸಂಶೋಧಕ ಡಾ.ಎಂ.ಎಂ. ಕಲಬುರ್ಗಿಯವರ ಪತ್ರ ಡಾ. ಎಂ.ಚಿದಾನಂದಮೂರ್ತಿ ಮತ್ತು ವೀರಶೈವ ವಾದ ( ವಾವಾ ಜ 20) ಸಂಶೋಧನಾ ವ್ಯಾಸಂಗದ ಅಭಿಪ್ರಾಯಕ್ಕಿಂತ ಪರಸ್ಪರ ದೋಷಾರೋಪಣೆಯಾಗಿದೆ. ಐತಿಹಾಸಿಕ ಸತ್ಯವನ್ನು ಒಪ್ಪಿಕೊಳ್ಳದೆ ಮೊಂಡುವಾದ ಮಾಡುವ ಕಲಬುರ್ಗಿಯವರ ಮೇಲೆ ಸಾಮಾಜಿಕ ಹೊಣೆಗಾರಿಕೆಯಿದೆ.

‘ವಾರಕ್ಕೊಮ್ಮೆ ತಪ್ಪದೇ ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವ ಉತ್ಸಾಹದ ಡಾ. ಚಿದಾನಂದಮೂರ್ತಿ ಅವರು’ ಎಂದು ಬರೆಯುವ ಕಲಬುರ್ಗಿಯವರು ಕೂಡ ಈ ಮಾತಿಗೆ ಹೊರತಲ್ಲ. ಅವರ ಮಾತಿನ ವ್ಯಂಗ್ಯ ಪತ್ರಿಕೆಯ ತೀರ ಸಾಮಾನ್ಯ ಓದುಗನಿಗೂ ತಟ್ಟುತ್ತದೆ. ಮಾಧ್ಯಮಗಳು ಸಂಶೋಧಕರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತವೆ. ಅದರ ದುರುಪಯೋಗ ಅವರಿಂದ ಆಗಬಾರದು.

ಸಾಮಾಜಿಕ ಸ್ವಾಸ್ಥ್ಯ ಪರಂಪರೆಯ ನಂಬುಗೆಯ ಬೇರುಗಳನ್ನು ಮತ್ತೆ ಮತ್ತೆ ಕೆದಕುವ ಕೆಲಸ ಆಗಬಾರದು. ಶೈವ ಬ್ರಾಹ್ಮಣರಾಗಿದ್ದ ಬಸವಣ್ಣನವರು ವೀರಶೈವವನ್ನು ಒಪ್ಪಿಕೊಂಡು ವೀರಶೈವರಾದರು ಎಂಬುದು ಒಂದು ಐತಿಹಾಸಿಕ ಸತ್ಯ. ಈ ಮಾತನ್ನು ಕಲಬುರ್ಗಿಯವರೂ ಒಪ್ಪುತ್ತಾರೆ.

ಪ್ರಾಚೀನ ವೀರಶೈವವನ್ನು ಅನ್ವಯಿಕ ಲಿಂಗಾಯತವನ್ನಾಗಿ ಪರಿವರ್ತಿಸಿದರೆನ್ನುವುದು ಪ್ರಾಜ್ಞರು ಒಪ್ಪುವ ಮಾತು. ವೀರಶೈವ-ಲಿಂಗಾಯತದ ಪದವ್ಯಾಪ್ತಿ ಇಷ್ಟೇ ಎಂದು ಹರ-ಗುರು ಚರಮೂರ್ತಿಗಳು ಪುಷ್ಟೀಕರಿಸಿದ್ದಾರೆ. ಈ ಮಾತನ್ನು ಜನಸಾಮಾನ್ಯರೂ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಯಾರ ವೈಯಕ್ತಿಕ ಪ್ರತಿಷ್ಠೆಯ ಮಾತೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.