ಕಾಂಗ್ರೆಸ್ ಅಧ್ಯಕ್ಷರಾಗಿ ಶ್ರೀ ನಿಜಲಿಂಗಪ್ಪ ಅವಿರೋಧ ಆಯ್ಕೆ
ನವದೆಹಲಿ, ಡಿ. 7– ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಸರ್ವಾನುಮತದಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಶ್ರೀ ಸಾದಿಕ್ ಆಲಿಯವರು ಇಂದು ಇಲ್ಲಿ ಪ್ರಕಟಿಸಿದರು.
*
ಮೂದೇವಿ
ನವದೆಹಲಿ, ಡಿ. 7– ‘ಕೈಯ್ಯಲ್ಲಿ ಕಸಪೊರಕೆ– ಕಡೆಯ ಹೆಸರು ಮಾತ್ರ ದೇವಿ’.
ಹಿಂದಿಗೆ ನೀಡಲಾಗುತ್ತಿರುವ ಸ್ಥಾನ ಮಾನವನ್ನು ಸುಚೇತ ಕೃಪಲಾನಿ ಅವರು ನಾರಿಗೆ ಹೋಲಿಸಿದ್ದು ಹೀಗೆ.
ಅಧಿಕೃತ ಭಾಷಾ (ತಿದ್ದುಪಡಿ) ಮಸೂದೆ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ, ‘ಮಸೂದೆಯನ್ನು ಅದರ ಈಗಿನ ರೂಪದಲ್ಲಿಯೇ ಅಂಗೀಕರಿಸಿದರೆ, ಹಿಂದಿ ಭಾಷೆಯು ಹೆಸರಿಗೆ ಮಾತ್ರ ಅಧಿಕೃತ ಭಾಷೆಯಾಗುತ್ತದೆಯೇ ಹೊರತು ಕಾರ್ಯತಃ ಅಲ್ಲ’ ಎಂದರು ಕೃಪಲಾನಿ. ‘ಹೆಣ್ಣನ್ನು ದೇವಿ ಎಂದು ಕರೆದು, ಪೂಜಿಸಿ, ಅವಳ ಕೈಯಲ್ಲಿ ಬೀದಿ ಕಸ ಗುಡಿಸುವ ಕೆಲಸ ಮಾಡಿಸಿದಂತೆ’ ಎಂದು ಅವರು ನುಡಿದಾಗ ಸಭೆ ಘೊಳ್ಳನೆ ನಕ್ಕಿತು.
*
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿಂದಿ ನಿಯಮ ಸಡಿಲಿಕೆ
ಬೆಂಗಳೂರು, ಡಿ. 7– ರಾಜ್ಯ ಸರ್ಕಾರವು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಹಿಂದಿ ವಿಷಯ ಕುರಿತಾದ ನಿಯಮವನ್ನು ಸಡಿಲಗೊಳಿಸಿದೆ.
ಸದ್ಯಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಭಾಗ–1ರ ಕನ್ನಡ ವಿಷಯದಲ್ಲಿ ಶೇಕಡಾ ಕನಿಷ್ಠ 30 ಹಾಗೂ ಹಿಂದಿ ವಿಷಯದಲ್ಲಿ ಶೇಕಡಾ ಕನಿಷ್ಠ 25 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಆದರೆ ಈ ನಿಯಮಾವಳಿ ಸಡಿಲಿಕೆಯಿಂದ ಇನ್ನು ಮೇಲೆ ಭಾಗ–1ರ ಕನ್ನಡ ವಿಷಯದಲ್ಲಿ ಶೇಕಡಾ ಕನಿಷ್ಠ 35 ಅಂಕಗಳನ್ನು ಪಡೆದು, ಹಿಂದಿಯಲ್ಲಿ ಎಷ್ಟೇ ಅಂಕಗಳನ್ನು ಪಡೆದರೂ ಅವರು ಉತ್ತೀರ್ಣರೆಂದು ಸಾರಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.