ADVERTISEMENT

ಸದ್ಬಳಕೆಗೆ ಸುಸಮಯ

ಪ್ರಾಣೇಶ ಪೂಜಾರ ಗಿಣಗೇರಾ
Published 8 ಮೇ 2016, 19:44 IST
Last Updated 8 ಮೇ 2016, 19:44 IST

ರಾಜ್ಯದಲ್ಲಿ ಭೀಕರ ಬರ ಇದೆ. ಜನ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಕೆಲವೆಡೆ ಕೆರೆ ಹೂಳೆತ್ತುವ ಕೆಲಸವನ್ನು ನೀಡಿದೆ. ಇದು ಒಳ್ಳೆಯ ನಿರ್ಧಾರ. ಇದರ ಜತೆಗೆ ಹಳ್ಳಿಗಳ ರಸ್ತೆ ಅಕ್ಕಪಕ್ಕ ಹಾಗೂ ಸರ್ಕಾರದ ಖಾಲಿ ಜಾಗದಲ್ಲಿ   ಗಿಡ ನೆಡುವ ಕೆಲಸವನ್ನು ವಹಿಸಬೇಕು.

ಮುಂಗಾರು ಇನ್ನೇನು ಕೆಲವೇ ದಿನಗಳಲ್ಲಿ  ರಾಜ್ಯಕ್ಕೆ ಪ್ರವೇಶಿಸುತ್ತದೆ. ಈ ಬಾರಿ ಉತ್ತಮ ಮಳೆ ಆಗುತ್ತದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಆದಕಾರಣ ಈಗ ಗಿಡ ನೆಟ್ಟರೆ  ಅದು ಬದುಕಿ ಉಳಿಯುವ ಸಾಧ್ಯತೆ ಹೆಚ್ಚು.

ನೀರಿನ ಅಭಾವ ಸ್ಥಿತಿಯ ಕಷ್ಟ ಈಗ ಮನವರಿಕೆ ಆಗಿದೆ. ಅದನ್ನು ಮರೆಯಬಾರದು. ಮಳೆ ನೀರಿನ ಸದ್ಬಳಕೆಗಾಗಿ ಸರ್ಕಾರ ಈಗಲೇ ಯೋಜನೆ ರೂಪಿಸಲು ಮುಂದಾಗಲಿ.

ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಚೆಕ್‌ ಡ್ಯಾಮ್‌ಗಳ ಮೂಲಕ ಸಂಗ್ರಹಿಸಿ ಬಳಸಿಕೊಳ್ಳಬೇಕು. ಇದಕ್ಕೆ ರಾಜಸ್ತಾನದ ಮಾದರಿ ಅನುಸರಿಸಲಿ. ರಾಜಸ್ತಾನದಲ್ಲಿ ವಾರ್ಷಿಕ ಮಳೆ ಪ್ರಮಾಣ ಕಡಿಮೆ. ಕೃಷಿ ಯೋಗ್ಯ ಭೂಮಿಯೂ ಕಡಿಮೆ ಇದೆ. ಆದರೆ ಅಲ್ಲಿನ ಜನರು ಇರುವ ಅಲ್ಪಸ್ವಲ್ಪ ಜಾಗದಲ್ಲಿಯೇ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಿಕೊಂಡು ಕೃಷಿ ಮಾಡುತ್ತಾರೆ.  ಗಿಡಗಳನ್ನೂ ನೆಟ್ಟಿದ್ದಾರೆ. ಇದರಿಂದ ಅರಣ್ಯ ವೃದ್ಧಿ ಜತೆಗೆ ಜಲಸಂಪತ್ತಿನ ಸಂರಕ್ಷಣೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.