ADVERTISEMENT

ಸಾಮಾಜಿಕ ಸುಧಾರಣೆಯತ್ತ...

ಪ್ರೊ.ಕೃಷ್ಣನಾಯಕ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ಕರ್ನಾಟಕದಲ್ಲಿ ಇದೀಗ ತಾನೆ ಅಧಿಕಾರ ಗದ್ದುಗೆಯನ್ನೇರಿದ ಕಾಂಗ್ರೆಸ್ ಪಕ್ಷವು ತನ್ನ ಸ್ವಾರ್ಥವನ್ನು ಬದಿಗಿಟ್ಟು ಜನಪರ ಹಿತಾಸಕ್ತಿಯೇ ತನ್ನ ಅಸ್ತಿತ್ವವನ್ನು ಭದ್ರಪಡಿಸುವ ಸಾಧನವೆಂಬುದನ್ನು ಅರ್ಥಮಾಡಿಕೊಳ್ಳುತ್ತಿರುವುದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆ. ಇಂತಹದೊಂದು ಬದಲಾವಣೆ ಸಕಾಲಿಕವಾಗಿದೆ.

ಅರ್ಥಶಾಸ್ತ್ರಜ್ಞ ಪ್ರೊ.ಜೆ.ಎಂ. ಕೇನ್ಸ್‌ರವರು ಎರಡನೇ ಮಹಾಯುದ್ಧಕ್ಕೆ ಮೊದಲೇ ತಮ್ಮ ಅಪೂರ್ವ ಗ್ರಂಥವಾದ `ಥಿಯರಿ ಆಫ್ ಎಂಪ್ಲಾಯ್‌ಮೆಂಟ್' ಹೊತ್ತಿಗೆಯ ಉದ್ಯೋಗ ಸಿದ್ಧಾಂತದಲ್ಲಿ ಕೊಟ್ಟಿರುವ ಸಲಹೆಯಂತೆ ಸರ್ಕಾರವೇ ಮುಂದೆ ಬಂದು ವಿವಿಧ ಉತ್ಪಾದನಾ ಕ್ಷೇತ್ರಗಳಲ್ಲಿ ಅಗತ್ಯ ಪ್ರಮಾಣದ ಹಣವನ್ನು ಬಂಡವಾಳವಾಗಿ ತೊಡಗಿಸಬೇಕು. ಆಗ ಮಾತ್ರ ತನ್ನ ದೇಶದ ಜನರಿಗೆ ಕೈತುಂಬ ಕೆಲಸ ಅಂದರೆ ಉದ್ಯೋಗಾವಕಾಶವನ್ನು ಒದಗಿಸಿಕೊಡುವುದರ ಮೂಲಕ ಆರ್ಥಿಕಾಭಿವೃದ್ಧಿಯ ಬಾಗಿಲನ್ನು ತೆರೆಯಬಹುದು. ಆಗ ಮಾತ್ರವೇ ಜನರು ಸೋಮಾರಿಗಳಾಗದೆ ತಮಗೆ ಅಗತ್ಯವಾದ ಊಟ, ಬಟ್ಟೆ ಹಾಗೂ ವಸತಿ ಸೌಲಭ್ಯವನ್ನು ಪಡೆದು ಆ ಮೂಲಕ ಸಮಾಧಾನಕರ ಜೀವನ ನಡೆಸಬಹುದು ಎಂಬುದನ್ನು ಸ್ಪಷ್ಟಪಡಿಸಿರುವುದು ಇಂದಿಗೂ ಅಂದಿಗೂ ಮತ್ತು ಎಂದೆಂದಿಗೂ ಅನ್ವಯವಾಗುವಂತಹ ಮಾತಾಗಿದೆ.

ಇದರ ಅರ್ಥವಿಷ್ಟೆ: ಸರ್ಕಾರ ಪ್ರಥಮವಾಗಿ ಯೋಚಿಸಬೇಕಾದುದು ಜನಪರ  ಕಾರ್ಯಕ್ರಮ. ಅಂದರೆ ನಿರುದ್ಯೋಗಿಗಳಿಗೆ ಕೈತುಂಬ ಕೆಲಸವನ್ನು ಒದಗಿಸುವುದು. ಅವರ ಮನೆಬಾಗಿಲಿಗೆ ಅಗತ್ಯವೆನಿಸಿದ ಮೂಲ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವುದರಿಂದ ಸಾಮಾಜಿಕ ಸ್ವಾಸ್ಥ್ಯ ಸುಧಾರಣೆಯಾಗುವುದು ಬಹುದೂರ ಉಳಿದುಬಿಡುತ್ತದೆ.

ನಮ್ಮ ದೇಶದ ಬೃಹತ್ ಜನಸಂಖ್ಯೆಗೆ ಪಂಚೆ, ಸೀರೆ ಹಾಗೂ ಆಹಾರ ಪದಾರ್ಥಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವುದೇ ಸರ್ಕಾರದ ಪರಮ ಹಿತ ಕಾರ್ಯವಾಗಬಾರದು. ಅದಕ್ಕೆ ಬದಲು ಪ್ರೋತ್ಸಾಹದಾಯಕ ಕೆಲಸಗಳನ್ನು ಹಮ್ಮಿಕೊಂಡು ಅವರನ್ನು ಆಯಾ ಕ್ಷೇತ್ರದಲ್ಲಿ ತೊಡಗಿಸಬೇಕು. ಇದನ್ನು ಸಾಮಾಜಿಕ ಆರ್ಥಿಕಾಭಿವೃದ್ಧಿ ಎನ್ನಬಹುದು. ಹೊಸ ಸರ್ಕಾರಗಳು ಜನರನ್ನು ಸೋಮಾರಿಗಳನ್ನಾಗಿ ಮಾಡದೆ ಅವರಿಗೆ ಅಗತ್ಯವಾದ ಸರಕು ಸಾಮಗ್ರಿಗಳನ್ನು ಹಿತಮಿತವಾಗಿ ಒದಗಿಸುವುದೇ ಗಾಂಧೀಜಿಯ ಆದರ್ಶ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.