ADVERTISEMENT

ಸಾಹಿತಿಗಳ ‘ಕುಡಿತ’ದ ಮಾತು ಸರಿಯೇ?

ಡಾ.ಎಂ.ಚಿದಾನಂದ ಮೂರ್ತಿ, ಬೆಂಗಳೂರು
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್‌. ಅನಂತಮೂರ್ತಿ ಅವರು ‘ನಮ್ಮ ಮೆಟ್ರೊ’ ಬುಲೆವಾರ್ಡ್‌ ನೋಡಲು ತಮ್ಮ ಪತ್ನಿ ಸಮೇತ ಬಂದಾಗ ಈ ಮಾತನ್ನು ಆಡಿದರೆಂದು ತಮ್ಮ ಪತ್ರಿಕೆ ಪ್ರಧಾನವಾಗಿ ವರದಿ ಮಾಡಿದೆ (ಪ್ರ.ವಾ. 30.12.13). ‘ಅವಳ ಒಂದು ಕಣ್ಣು ಯಾವಾ­ಗಲೂ ನನ್ನ ಮೇಲೇ ಇರುತ್ತೆ, ವಿಸ್ಕಿ ಜಾಸ್ತಿ ಹಾಕ್ಕೊಂಡ್ರೆ ಹೆಚ್ಚಾದ್ದನ್ನು ತಾನೇ ಕುಡಿದು­ಬಿಡುತ್ತಾಳೆ’. ಹಾಸ್ಯದ ಧ್ವನಿಯಲ್ಲಿ ಅವರು ಆಡಿದ ಮಾತು ನಗೆ ಬರಿಸಿದ್ದು ಸಹಜವೇ– ಆ ಮಾತನ್ನು ಕೇಳಿದ ಜನರು ನಕ್ಕುಬಿಟ್ಟರಂತೆ.

ಒಬ್ಬ ಪ್ರಸಿದ್ಧ ಸಾಹಿತಿ, ಅಂತಹ ಮಾತನ್ನಾಡು­ವಾಗ ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ. ಅವರ ಅಂತಹ ಮಾತು ವಿಸ್ಕಿ ಕುಡಿಯದೇ ಇರುವ ಯುವ­ಕ­ರಿಗೂ ಒಂದು ಪ್ರಚೋದನೆ ತರುವ ಸಾಧ್ಯತೆ ಖಂಡಿತ ಉಂಟು. ಅದರಲ್ಲೂ ಈಚಿನ ಯುವ ಪೀಳಿಗೆ ಅಂತಹ ಅಭ್ಯಾಸಗಳಿಗೆ ಮುಗಿ ಬೀಳು­ವುದು ಹೆಚ್ಚಾಗುತ್ತಿರುವಾಗ ಪ್ರಸಿದ್ಧ ಸಾಹಿತಿ­ಗಳು ತಾವು ಆಡುವ ಮಾತಿನ ಬಗ್ಗೆ ಸಂಯಮ ವಹಿಸುವುದು ಅಗತ್ಯ.

ಅಷ್ಟೇ ಅಲ್ಲ, ಇತರ ಜನರಿಗೆ ಒಂದು ರೀತಿ­ಯಲ್ಲಿ ಮಾದರಿಯಾಗುವ ಹಿರಿಯ ಸಾಹಿತಿಗಳು ಅಂತಹ ಮಾತನ್ನು ಆಡಲೂ­ಬಾರದು. ಅಂತಹ ಕೆಟ್ಟ ಅಭ್ಯಾಸಗಳನ್ನು ಕೈಬಿಡ­ಬೇಕೆಂದು ನಾನು ಸೂಚಿಸಬಯಸುತ್ತೇನೆ. ಸಾಮಾ­ಜಿಕ ಜೀವನವನ್ನು ಒಂದು ರೀತಿಯಲ್ಲಿ ರೂಪಿಸುವ ಲೇಖಕರ ಹೊರ ನುಡಿಯಂತೆಯೇ ಒಳ ನಡೆಯೂ ಶುಭ್ರವಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.