ADVERTISEMENT

ಸಿ.ಎಂ ಮಾತಿಗೂ ಮನ್ನಣೆ ಇಲ್ಲವೆ?

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಪಡಿತರ ಚೀಟಿ ಸಮಸ್ಯೆಯನ್ನು ದಶಕಗಳಾದರೂ ಪರಿಹರಿಸಲಾಗಿಲ್ಲ. ಆದರೆ  ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕೇಂದ್ರಸರ್ಕಾರದ ವ್ಯಾಪ್ತಿಗೆ ಬರುವ ಅಡುಗೆ ಅನಿಲ ಸಂಪರ್ಕಗಳನ್ನು ಸರಿಪಡಿಸುವ ಕಾತರ! 

ಅನಿಲ ಸಂಪರ್ಕ ಪಡೆದವರ ದಾಖಲೆಗಳ ಪೂರೈಕೆಯಲ್ಲಿನ ಸಂಕೀರ್ಣ ಸಮಸ್ಯೆಗಳ ಅರಿವಿರುವ ಮುಖ್ಯಮಂತ್ರಿಗಳು ಯಾವುದೇ ಅನಿಲ ಸಂಪರ್ಕ ರದ್ದುಗೊಳಿಸದಂತೆ ಆದೇಶಿಸಿದ್ದರೂ ಇದೀಗ ವಿತರಕರು ಸಿಲಿಂಡರ್‌ಗಳನ್ನು ಪೂರೈಸುತ್ತಿಲ್ಲ. 

ರಾಜ್ಯವು ವಿವಿಧ ಕಾರಣಗಳಿಗೆ ಈಗಾಗಲೇ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕಲ್ಲಿದ್ದಲು ಕೊಡದಿರುವುದೇ ಕಾರಣವೆಂದು ಕಿಡಿ ಕಾರುತ್ತಿರುವ ಕರಂದ್ಲಾಜೆಯವರು ಹಾಗೂ ಹೀಗೂ ಸಮರ್ಪಕವಾಗಿ ಅಡುಗೆ ಅನಿಲ ಪೂರೈಸುತ್ತಿರುವ ಕೇಂದ್ರದ ಕೆಲಸದಲ್ಲೇಕೆ ಕೈಹಾಕಬಯಸುತ್ತಿದ್ದಾರೆಯೋ ತಿಳಿಯದು. 

`ಗಂಡ ಹೆಂಡಿರ ಜಗಳದ ಮಧ್ಯೆ ಕೂಸು ಬಡವಾಯಿತು~ ಎನ್ನುವಂತೆ ಈ ಸಚಿವೆಯ ಪ್ರತಿಷ್ಠೆಗಾಗಿ ಸಾಮಾನ್ಯ ನಾಗರಿಕರು ಪರದಾಡುವಂತಾಗಿದೆ. ಬಹುತೇಕ ಜನರು ಅನಿಲ ಒಲೆ ಬಿಟ್ಟು ಬದುಕಲಾಗದ ಸ್ಥಿತಿಗೆ ತಲುಪಿದ್ದಾರೆ. ಪರ‌್ಯಾಯ ಇಂಧನ ಮೂಲಗಳೂ ದುರ್ಲಭ.

ಬೆಲೆಯೇರಿಕೆಯ ಬಿಸಿಯಲ್ಲಿ ಬವಳಿ ಬಂದಂತಾಗಿರುವ ನಾಗರಿಕರಿಗೆ ತುತ್ತು ಅನ್ನ ಬೇಯಿಸಿಕೊಳ್ಳಲೂ ತತ್ವಾರ ಮಾಡುತ್ತಿರುವ ಸಚಿವರ ಕ್ರಮ ತರವಲ್ಲ. ಸಚಿವೆಯವರು ಮುಖ್ಯಮಂತ್ರಿಗಳ ಮಾತಿಗೆ ಮನ್ನಣೆ ನೀಡಿ ಜನಸಾಮಾನ್ಯರಿಗೆ ಉಪಕರಿಸಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.