ADVERTISEMENT

ಹಂತಕರ ಗಲ್ಲು ಶಿಕ್ಷೆ ಗೆ ಅಡ್ಡಿ ಮಾಡುವುದು ಬೇಡ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಾದ ಮೂವರನ್ನು ಗಲ್ಲಿಗೇರಿಸಲು ರಾಷ್ಟ್ರಪತಿ ಅವರು ಅನುಮತಿ ಕೊಟ್ಟಿದ್ದಾರೆ. ಆದರೆ ಅಪರಾಧಿಗಳ ಕುಟುಂಬದವರು ಒತ್ತಡ ತಂದು ತಮಿಳುನಾಡು ಸರ್ಕಾರದ ನಿಲುವನ್ನು  ಬದಲಾಯಿಸುತ್ತಿದ್ದಾರೆ.

 ಮುಖ್ಯಮಂತ್ರಿ ಜಯಲಲಿತಾ ಅವರು ಒಂದು ಹೇಳಿಕೆ ಕೊಟ್ಟಿದ್ದರು. ರಾಷ್ಟ್ರಪತಿಗಳು ಗಲ್ಲು ಶಿಕ್ಷೆಗೆ ತಮ್ಮ ನಿರ್ಧಾರವನ್ನು ಸೂಚಿಸಿರುವಾಗ ತಾನೇನು ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಈಗ ಅವರು ಬಣ್ಣ ಬದಲಾಯಿಸುತ್ತಿದ್ದಾರೆ. ತಮಿಳುನಾಡು ವಿಧಾನ ಸಭೆಯಲ್ಲಿ ಒಮ್ಮತದಿಂದ ಗಲ್ಲು ಶಿಕ್ಷೆಯನ್ನು ತಪ್ಪಿಸಬೇಕೆಂದು ಒಂದು ಠರಾವು ಮಾಡಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ.

ನಮ್ಮ ದೇಶದ ಪ್ರಧಾನ ಮಂತ್ರಿಯಾಗಿದ್ದ ಹಾಗೂ ಜನಪ್ರಿಯರಾಗಿದ್ದ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದವರು ತಮಗೆ ಜೀವದಾನ ಕೊಡಬೇಕೆಂದು ಮೊರೆ ಇಡುತ್ತಿರುವುದು ಮತ್ತು ಅವರ ಮೊರೆಗೆ ಸಮರ್ಥನೆ ಕೊಡುತ್ತಿರುವುದು ಹಾಸ್ಯಾಸ್ಪದ.
ಈ ಮಧ್ಯೆ ಜಮ್ಮು ಕಾಶ್ಮೀರದ ಮುಖ್ಯ ಮಂತ್ರಿಗಳು ಸಹ ಸಂಸತ್ ಮೇಲಿನ ದಾಳಿಯ ಅಪರಾಧಿ ಅಫ್ಜಲ್ ಗುರು ಬಗ್ಗೆ ಸಹಾನುಭೂತಿ ವ್ಯಕ್ತ ಪಡಿಸುತ್ತಿದ್ದಾರೆ. ರಾಜೀವ್ ಗಾಂಧಿಯವರ ಹತ್ಯೆ ಮಾಡಿದವರಿಗೆ ಜೀವದಾನ ಕೊಡ ಬಯಸಿದರೆ, ಅಫ್ಜಲ್ ಗುರು ಮತ್ತು ಕಸಾಬ್‌ಗೂ ಜೀವದಾನ ಕೊಡಲೇ ಬೇಕಾಗುವುದು. ತಾರತಮ್ಯ ಮಾಡಲಾಗದು.

ಅಫ್ಜಲ್‌ಗೆ ಕ್ಷಮಾದಾನ ಸಿಗದಿದ್ದರೆ ಜಮ್ಮು ಕಾಶ್ಮೀರ ಬೆಂಕಿಗೆ ಆಹುತಿಯಾಗುವುದು ಎಂಬ ಭಯವನ್ನು ಸೃಷ್ಟಿ ಮಾಡುತ್ತಿದ್ದಾರೆ.

ಆದರೆ ರಾಜೀವ್ ಹತ್ಯೆ ಮಾಡಿದವರಿಗೆ ಮತ್ತು ಅಫ್ಜಲ್ ಗುರುಗೆ ಯಾವ ಕಾರಣಕ್ಕೂ ಕ್ಷಮಾದಾನ ಕೊಡಬಾರದು.

ತಮಿಳುನಾಡು ಸರ್ಕಾರ ವಿಧಾನ ಸಭೆಯ ನಿರ್ಣಯವನ್ನು ಕಳುಹಿಸಿಕೊಟ್ಟರೆ ಕೇಂದ್ರ ಸರ್ಕಾರ ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡಬಾರದು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇವರಿಗಾಗಿ ಯಮರಾಯ ಕಾದಿದ್ದಾನೆ. ಕೂಡಲೇ ಆತನ ವಶಕ್ಕೆ ಇವರನ್ನು ಕೊಡುವುದು ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.