1950ರ ಸುಮಾರಿನಲ್ಲಿ ನಮ್ಮ ಹಳ್ಳಿಯಲ್ಲಿ ಪರಿಶಿಷ್ಟ ಜಾತಿಗಳ ಜನರ ಕಾಲೋನಿಯಲ್ಲಿ ಅಗ್ನಿ ದುರಂತ ಸಂಭವಿಸಿತು. ಆಗ ಹಳ್ಳಿಯ ಎಲ್ಲಾ ಜಾತಿಯ ಜನರೂ ಬೆಂಕಿಯನ್ನು ನಂದಿಸಲು ಸಹಕಾರ ನೀಡಿದರು. ಪರಿಶಿಷ್ಟರ ಮನೆಗಳಲ್ಲಿ ರಾಗಿ ಮತ್ತು ಹುರಳಿಕಾಳು ಅಲ್ಪ ಸಂಗ್ರಹದ ಹೊರತು ಬೇರೇನೂ ಇರಲಿಲ್ಲ. ಅವರಿಗೆ ನಮ್ಮ ಇಡೀ ಹಳ್ಳಿ ಸಹಾಯ ಹಸ್ತಚಾಚಿತು.
ಇದೇ ಹಳ್ಳಿಯ ಮುಸ್ಲಿಂ ಬಾಂಧವರ ಮೊಹರಂ ಹಬ್ಬದಲ್ಲಿ ಶೇ 85ರಷ್ಟು ಹಿಂದುಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹಿಂದುಗಳೂ ಹುಲಿ ಮತ್ತು ಗೊರವಜ್ಜನ ವೇಷ ಧರಿಸುತ್ತಿದ್ದರು.
ಒಬ್ಬಿಬ್ಬ ಮುಸ್ಲಿಂ ಮುಖಂಡರು ಹಳ್ಳಿಯ ಎಲ್ಲರ ಮನೆಗಳಿಗೆ ಹೋಗಿ ಸಕ್ಕರೆ ಹಂಚುತ್ತಿದ್ದರು. ಜಾತಿ ಜಾತಿಗಳ ನಡುವೆ ದ್ವೇಷಗಳಿಲ್ಲದೆ, ಇನ್ನೊಬ್ಬರ ಜಾತಿ, ಧರ್ಮ ಆಚರಣೆಗಳಲ್ಲಿ ಹಸ್ತಕ್ಷೇಪ ಇರುತ್ತಿರಲಿಲ್ಲ. ಈಗ ಏನಾಗಿದೆ?
ಜಾತಿ- ಜಾತಿಗಳ ಮಧ್ಯೆ ಪೈಪೋಟಿ, ದ್ವೇಷ, ಅನುಮಾನಗಳು ಬೆಳೆದು ಸಣ್ಣ ಕಾರಣಕ್ಕೆ ಗಲಭೆಗಳಾಗುತ್ತಿವೆ. ಬೇರೆ ಧರ್ಮ, ಜಾತಿಯ ಜನರನ್ನು ಹಿಂಸಿಸಿ ಕೊಲ್ಲುವುದು ನಡೆಯುತ್ತಿದೆ. ಇದಕ್ಕೆ ಕಾರಣ ಜನರ ನಡುವೆ ಹಗೆತನ ತುಂಬುತ್ತಿರುವ ನಮ್ಮ ರಾಜಕೀಯ ನಾಯಕರುಗಳು. ಅದು ಜನರಿಗೆ ಅರ್ಥವಾಗುವುದು ಯಾವಾಗ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.