ಯಥಾಪ್ರಕಾರ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತದೆ, ಹೋಗುತ್ತದೆ. ಅಧ್ಯಕ್ಷರ ಮಾತುಗಳು ಆಡಿಯಾದ ಮೇಲೆ ಕಳೆದೂ ಹೋಗುತ್ತಿವೆ. ನಿರ್ಣಯಗಳೂ ಪಾಸಾಗುತ್ತವೆ. ಜಾರಿಗೆ ಬಾರದೇ ಫೇಲೂ ಆಗುತ್ತಿವೆ. ಹಾಗೆಯೇ ಈ ಮಾತು ಮತ್ತು ನಿರ್ಣಯಗಳ ದಯನೀಯ ಸ್ಥಿತಿಗೆ ಯಾರು ಕಾರಣರು? ಈ ಪ್ರಶ್ನೆಗೆ ಉತ್ತರವನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇವೆಲ್ಲ ಕಾರ್ಯಗತವಾಗಲಿ ಎನ್ನುವ ಬೇಡಿಕೆಗೆ ಮಾತ್ರ ಶತಮಾನದ ‘ಸಂಭ್ರಮ’...!
ಸಮ್ಮೇಳನಾಧ್ಯಕ್ಷರ ಮಾತುಗಳಿಗೆ ಯಾವಾಗಿನಿಂದಲೂ ಸಮಯ ಪರಿಪಾಲನೆಯ ನೆಪದಲ್ಲಿ ಕತ್ತರಿ ಪ್ರಯೋಗದ ಶಿಕ್ಷೆ ನೀಡುತ್ತಲೂ ಬರಲಾಗಿದೆ. ಈ ಕುರಿತು ಪಾಟೀಲ ಪುಟ್ಟಪ್ಪ ತಾವು ಸಮ್ಮೇಳನಾಧ್ಯಕ್ಷರಾದ ಹೊತ್ತಲ್ಲಿ ಆಗಿನ ಮುಖ್ಯಮಂತ್ರಿಗಳನ್ನೇ ತರಾಟೆ ತೆಗೆದುಕೊಂಡಿದ್ದು ಇತಿಹಾಸದ ಒಂದು ಭಾಗ ಮಾತ್ರವಾಗಿ ಉಳಿದು ಯಥಾ ಸ್ಥಿತಿ ಮುಂದುವರಿದಿದೆ. ಹೌದು, ಹಾಗಾದರೆ ಸದ್ಯ ಪರಿಷತ್ತಾದರೂ ಈಗ ಈ ಕುರಿತು ಏನು ಮಾಡಬೇಕು..? ಎಂಬುದಕ್ಕೆ ನನ್ನದೊಂದು ಸಲಹೆ ಏನೆಂದರೆ: ಈವರೆಗೂ ನಡೆದ ಎಂಬತ್ತು ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳನ್ನು ಹಲವು ಸಂಪುಟಗಳಲ್ಲಿ ಸಾಹಿತ್ಯ ಪರಿಷತ್ತು ಹೊರತರಬೇಕು.
ಈ ಯೋಜನೆಗೆ ಸರ್ಕಾರವೂ ತುಟಿಯೆರಡು ಮಾಡದೇ ಸಹಕರಿಸಬೇಕು. ಹಾಗೇ, ಆ ಕೃತಿಗಳು ಸುಲಭ ಬೆಲೆಯಲ್ಲಿ ಶ್ರೀಮಾನ್ ಕನ್ನಡಿಗನಿಗೆ ದೊರಕುವಂತಾಗಬೇಕು. ಪರಿಷತ್ತು ಮತ್ತು ಸರ್ಕಾರಕ್ಕೆ ಈ ಕೆಲಸ ಆಗದಿದ್ದರೆ, ಖಾಸಗಿ ಪ್ರಕಾಶನ ಸಂಸ್ಥೆಗಳಾದರೂ ಈ ಹೊರೆ ಹೊತ್ತು ಮೌಲಿಕವಾದ ಕನ್ನಡ ಕಟ್ಟೋಣದ ಬರೀ ಮಾತಲ್ಲದ ಕನ್ನಡ ನೆತ್ತರಿನ ಈ ನುಡಿಗಳನ್ನು ಪ್ರಕಟಿಸಲು ಮುಂದಾದಲ್ಲಿ ಅವು ಕನ್ನಡ ಬದುಕಿರುವವರೆಗೂ ಕನ್ನಡದ ಭಗವದ್ಗೀತೆಯಾಗಿ ಉಳಿಯಬಲ್ಲವು. ಸಮ್ಮೇಳನದ ನಿರ್ಣಯಗಳನ್ನು ಈಗಾಗಲೇ ಬೆಂಗಳೂರಿನ ಸುಮುಖ ಪ್ರಕಾಶನ ಹೊರತಂದಿದ್ದು ಶ್ಲಾಘನೀಯವೂ ಹೌದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ ಎಂಬ ಕೂಗಿಗೆ ಮನ್ನಣೆ ಸಿಗಬಹುದೇ..?
-–ವಿಜಯಕಾಂತ ಪಾಟೀಲ, ಕ್ಯಾಸನೂರು, (ಹಾನಗಲ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.