ADVERTISEMENT

‘ನಾಡಿ’ಯವರ ಸರಳತೆ

ನಗರ ಗುರುದೇವ ಭಂಡಾರ್ಕರ್‌, ಹೊಸನಗರ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

90ರ ದಶಕದಲ್ಲಿ ನಮ್ಮ ಬ್ಯಾಂಕಿನ ದಶಮಾನೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗ­ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ಮುಖ್ಯ ಅತಿಥಿಗಳಾಗಿ, 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾ. ಡಿಸೋಜ  ಅವರನ್ನು ಆಹ್ವಾನಿಸಿದ್ದೆವು. ಅದರಂತೆ ಕಾರ್ಯಕ್ರಮದ ದಿನದಂದು ಅವರನ್ನು ಸಾಗರದಿಂದ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದೆವು.

ಅದಕ್ಕೆ ಅವರು, ‘ಬೇಡ ಸಾಗರ–ಶಿವಮೊಗ್ಗ ತುಂಬಾ ಬಸ್ಸುಗಳಿವೆ. ನನಗಾಗಿ ವಾಹನ ವ್ಯವಸ್ಥೆ ಬೇಡ. ಬಸ್ಸಿನಲ್ಲೇ ಬರುವೆನು’ ಎಂದು ಹೇಳಿದ್ದರು.  ಅಂದಿನ ಕಾರ್ಯಕ್ರಮದಲ್ಲಿ ಅವರು ಕನ್ನಡ ಭಾಷೆ ಬೆಳೆದು ಬಂದದ್ದನ್ನು ಕೇಳುಗರಿಗೆ ಮನಮುಟ್ಟುವಂತೆ ಪ್ರಚುರ­ಪಡಿಸಿದ್ದು ನನ್ನ ಸ್ಮೃತಿಪಟಲದಲ್ಲಿ ಇನ್ನೂ ಹಸಿರಾಗಿದೆ.

ಈಗ ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಗರದಿಂದ ಅವರು ಸರ್ಕಾರಿ ಬಸ್‌ ಏರಿ ಹೊರಟರೂ ಆಶ್ಚರ್ಯವಿಲ್ಲ! ಇದರಿಂದ ಅವರ ಪ್ರಯಾಣದಲ್ಲಿ ಕೆಲವಾದರೂ ‘ಕತೆಗಳು’ ಹುಟ್ಟಿಕೊಳ್ಳಬಹುದು!! ಅಷ್ಟೊಂದು ಸರಳ ಮನುಷ್ಯ ಮತ್ತು ಕನ್ನಡ ನಾಡಿನ ಹೆಮ್ಮೆಯ ‘ನಾಡಿ’ ಅವರು.

‘ನಾಡಿ’ಯವರ ಪ್ರಥಮ ಪತ್ರ ‘ಪ್ರಜಾವಾಣಿ’ಯ ವಾಚಕರ ವಾಣಿಯಲ್ಲಿ ಪ್ರಕಟವಾ­ಗಿದ್ದುದರ ಕುರಿತು ಇತ್ತೀಚೆಗೆ ಅವರು ಬಹಿರಂಗ­ಪಡಿಸಿದ್ದರು. ಈ ಮೂಲಕ ಒಬ್ಬ ಕತೆಗಾರ, ಕಾದಂಬರಿಕಾರನನ್ನು ‘ಹುಟ್ಟು’­ಹಾಕಿದ ‘ಪ್ರಜಾವಾಣಿ’­ಗೂ ಅಭಿನಂದನೆಗಳು. ಪತ್ರಿಕೆ ಮತ್ತು ‘ನಾಡಿ’ಯವರಿಗೆ ಶುಭ ಹಾರೈಸುತ್ತಾ.... ಮಡಿಕೇರಿಯತ್ತ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.