ಸುಂದರಿಯರ ಸ್ವಾಗತಕ್ಕೆ ವಿಂಡ್ಸರ್ ತಯಾರಿ
ಬೆಂಗಳೂರು, ಅ. 18– ವಿಶ್ವ ಸುಂದರಿ ಸ್ಪರ್ಧೆಯ ದಿನಗಳು ಹತ್ತಿರವಾಗುತ್ತಿರುವಂತೆ ಪ್ರತಿಷ್ಠಿತ ಉತ್ಸವಕ್ಕೆ ಇಡೀ ಬೆಂಗಳೂರು ಸಜ್ಜಾಗುತ್ತಿದೆ.
ವಿಶ್ವದ 90 ದೇಶಗಳಿಂದ ಆಗಮಿಸಲಿ ರುವ ಸುಂದರಿಯರಿಗೆ ಆದರ– ಆತಿಥ್ಯಕ್ಕೆ ನಗರದ ವಿಂಡ್ಸರ್ ಮ್ಯಾನರ್ ಹೋಟೆಲ್ ಸಜ್ಜಾಗುತ್ತಿದೆ.
ವಿಶ್ವ ಸುಂದರಿಯರು ತಮ್ಮಲ್ಲಿ ತಂಗುವರೆಂದು ಜುಲೈ ತಿಂಗಳಲ್ಲಿ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಲು ಹೋಟೆಲ್ನ ಆಡಳಿತ ವರ್ಗ ಕ್ರಮ ಕೈಗೊಂಡಿದೆ ಎಂದು ಹೋಟೆಲ್ನ ಹಿರಿಯ ಅಧಿಕಾರಿ ಸುರುಚಿ ರಾಯ್
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೋಟೆಲ್ನ ವಿಶ್ರಾಂತಿ ಕೋಣೆಗಳನ್ನು ಯುದ್ಧೋಪಾದಿಯಲ್ಲಿ ಸಿದ್ಧಗೊಳಿಸುವ ಕ್ರಿಯೆ ಆರಂಭವಾಗಿದ್ದು, ಅವುಗಳಿಗೆ ಮನಕ್ಕೆ ಆಹ್ಲಾದ ನೀಡುವ ಆಕರ್ಷಕ ಬಣ್ಣ ಬಳಿಯಲಾಗಿದೆ. ಸದಾ ಮಿಂಚುವ ತಾಮ್ರದ ಕಲಾತ್ಮಕ ವಸ್ತುಗಳಿಗೆ ಪಾಲಿಷ್ ಮಾಡಿ ಮತ್ತಷ್ಟು ಮಿಂಚುವಂತೆ ಮಾಡಲಾಗಿದೆ. ಆಕರ್ಷಕ ತೆಳು ಬಣ್ಣದ ಪರದೆಗಳನ್ನು ಜಾರಿ ಬಿಡಲಾಗಿದೆ. ಹೊಸ ಚಿತ್ರಗಳನ್ನು ತೂಗು ಹಾಕಲಾಗಿದ ಎಂದು ಸಿದ್ಧತೆಗಳ ಬಗ್ಗೆ ಅವರು ವಿವರಿಸಿದರು.
ದೆಹಲಿ ವಿಜ್ಞಾನ ಭವನದಲ್ಲಿ ನರಸಿಂಹ ರಾವ್ ವಿಚಾರಣೆ
ನವದೆಹಲಿ, ಅ. 18 (ಯುಎನ್ಐ)– ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಭಾಗಿಯಾಗಿರುವ ಪ್ರಕರಣಗಳ ವಿಚಾರಣೆಯು ವಿಜ್ಞಾನ ಭವನದ ಕಟ್ಟಡದಲ್ಲಿ ನಡೆಯಲಿದೆ ಎಂದು ದೆಹಲಿ ಹೈಕೋರ್ಟ್ ಇಂದು ಪ್ರಕಟಿಸಿದೆ.
ರಾವ್ ವಿಚಾರಣೆ ಸ್ಥಳದ ಬಗ್ಗೆ ಕೋರ್ಟ್ ರಿಜಿಸ್ಟ್ರಾರ್ ಇಂದು ಸಂಜೆ ಅಧಿಸೂಚನೆ ಹೊರಡಿಸಿದ್ದಾರೆ. ಅಕ್ಟೋಬರ್ 11ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನ್ವಯ, ರಾವ್ ಅವರ ವಿಚಾರಣೆಯ ಸ್ಥಳ ವನ್ನು ನಿರ್ಧರಿಸುವುದನ್ನು ದೆಹಲಿ ಪೊಲೀಸ್ ಕಮೀಷನರ್ ಅವರ ಆಯ್ಕೆಗೆ ಬಿಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.