‘ಅಂತರ್ಜಲ ಮಟ್ಟ ಕುಸಿತ, ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ’ ಸಂಪಾದಕೀಯ (ಪ್ರ.ವಾ., ಡಿ.27) ಕಣ್ಣು ತೆರೆಸುವಂಥದ್ದು. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕುರಿತ ಸಂಗತಿಗಳು ಇನ್ನಾದರೂ ರಾಜ್ಯದ ನೀತಿ ನಿರೂಪಣೆ ಮತ್ತು ಸಾರ್ವಜನಿಕ ಚರ್ಚೆಯ ಆದ್ಯತಾ ವಿಷಯಗಳಾಗುವವೇ?
ಮೂರು ವರ್ಷಗಳ ಸತತ ಬರಗಾಲದಿಂದ ರಾಜ್ಯ ಬಸವಳಿದಿದೆ. ಹೊಳೆ- ಝರಿ, ಕೆರೆ-ಬಾವಿಗಳ ಮೇಲ್ಮೈ ನೀರನ್ನು ನಂಬಿ ಪರಂಪರಾನುಗತವಾಗಿ ಕೃಷಿ ಮಾಡಿಕೊಂಡಿದ್ದ ಮಲೆನಾಡೂ ಇದಕ್ಕೆ ಹೊರತಲ್ಲ. ಕಳೆದ ಬೇಸಿಗೆಯಲ್ಲಂತೂ ಮಣ್ಣಿನ ತೇವಾಂಶ ಕನಿಷ್ಠ ಮಟ್ಟಕ್ಕಿಳಿದು ಇಲ್ಲಿನ ಗದ್ದೆ-ತೋಟಗಳು ಒಣಗಿಹೋದವು. ಆಗಲೂ ಹೊಲದಲ್ಲಿ ಅಷ್ಟಿಟ್ಟು ಹಸಿರು ಉಳಿಸಿಕೊಂಡವರೆಂದರೆ ನೂರಾರು ಅಡಿ ಆಳದ ಕೊಳವೆಬಾವಿಯಿಂದ ನೀರನ್ನೆತ್ತಿ ಬಳಸಿದವರು!
ಹೀಗಾಗಿ, ಕೊಳವೆಬಾವಿ ತೋಡಿ ಅಂತರ್ಜಲ ದಕ್ಕಿದರೆ ಮಾತ್ರ ಕೃಷಿ ಸಾಧ್ಯವಾದೀತು ಎಂಬ ತೀರ್ಮಾನಕ್ಕೆ ಇಡೀ ಕೃಷಿ ಸಮುದಾಯ ಬರುತ್ತಿದೆ! ಈಗಿನ್ನೂ ಹೇಮಂತ; ವರ್ಷಋತು ಬರಲು ಇನ್ನೂ ಅರು ತಿಂಗಳಿವೆ. ಆದರೆ, ಸಹ್ಯಾದ್ರಿಯ ಜಿಲ್ಲೆಗಳಲ್ಲಿ ಈಗಲೇ ನೀರಿನ ಕೊರತೆ ಕಾಣಿಸುತ್ತಿದೆ. ಸಾಲ ಮಾಡಿಯಾದರೂ ಕೊಳವೆಬಾವಿ ತೋಡುವ ಕಾರ್ಯ ಈಗಾಗಲೇ ಎಲ್ಲೆಡೆ ಆರಂಭವಾಗಿದೆ!
ಇಷ್ಟಂತೂ ನಿಜ. ಬರುವ ಬೇಸಿಗೆ ಮತ್ತಷ್ಟು ಭೀಕರವಾಗಲಿದೆ ಮತ್ತು ‘ಕೊಳವೆಬಾವಿ ಯಂತ್ರಗಳ ಆರ್ಥಿಕತೆ’ ಇನ್ನೂ ವಿಸ್ತಾರವಾಗಲಿದೆ! ಊರೂರಿನಲ್ಲೂ ನೀರು ಬಾರದ ಕೊಳವೆಬಾವಿಗಳು ಜನರ ಹಣ ಹಾಗೂ ಭವಿಷ್ಯವನ್ನು ನುಂಗಿಹಾಕಲಿವೆ. ಚುನಾವಣೆ ಘೋಷಣೆಗಿಂತ ಮೊದಲೇ ಪ್ರಚಾರದಲ್ಲಿ ಮುಳುಗಿಬಿಟ್ಟಿರುವ ರಾಜಕೀಯ ಪಕ್ಷಗಳು ಮತ್ತು ನೇತಾರರು ಈ ವಿಷಯ ಎಲ್ಲಕ್ಕಿಂತ ಜರೂರಾದದ್ದು ಎಂದು ಅರಿತಾರೇ?
–ಕೇಶವ ಎಚ್. ಕೊರ್ಸೆ, ಶಿರಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.