ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ. ಸುಮಾರು 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್ ಒಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಆಯೋಗವು ತಿಳಿಸಿದೆ. ಈಗಾಗಲೇ 2000 ಹುದ್ದೆ ಖಾಲಿ ಇದೆ ಎಂದು ಹೇಳಲಾಗಿದೆ. ಈ ವರ್ಷ 30 ಸಾವಿರ ಜನ ನಿವೃತ್ತರಾಗುತ್ತಾರೆ ಎಂದು ಸರ್ಕಾರವೇ ತಿಳಿಸಿದೆ.
ಬಡ ಕುಟುಂಬಗಳ ಎಷ್ಟೋ ಮಂದಿ ಅರ್ಜಿ ಸಲ್ಲಿಸುವುದಕ್ಕೂ ಕಷ್ಟಪಡಬೇಕಾಗಿದೆ. ನಗರಗಳಲ್ಲಿನ ಯುವಕ–ಯುವತಿಯರಿಗೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಎಲ್ಲ ಬಗೆಯ ಸೌಕರ್ಯಗಳೂ ಇವೆ. ಆದರೆ ಗ್ರಾಮೀಣರು ಅದರಿಂದ ವಂಚಿತರಾಗಿದ್ದಾರೆ. ಅರ್ಜಿ ಶುಲ್ಕದಿಂದಲೇ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತದೆ. ವಯಸ್ಸು, ಅಂಕಗಳನ್ನು ಆಧಾರವಾಗಿಟ್ಟುಕೊಂಡು ಉದ್ಯೋಗ ಅವಕಾಶ ಕಲ್ಪಿಸಿದರೆ ಆಗುವುದಿಲ್ಲವೇ? ಅದಕ್ಕೆ ಅರ್ಜಿ, ಪರೀಕ್ಷೆ, ಮೌಲ್ಯಮಾಪನಗಳ ಕಸರತ್ತು ಬೇಕಿತ್ತೇ?
ಇದರ ಮಧ್ಯೆ ಮಹಿಳಾ ಮೀಸಲಾತಿ ಬೇರೆ! ಮಹಿಳೆಯರಿಗೆ ಶೇ 33ರಷ್ಟು ಉದ್ಯೋಗ ನೀಡಿಬಿಟ್ಟರೆ ಎಲ್ಲವೂ ಸರಿಹೋಗುತ್ತ
ವೆಯೇ? ಇಂಥ ಮೀಸಲಾತಿಯನ್ನು ದೇವರು ಮೆಚ್ಚುವನೇ? ನಾಗಾಲ್ಯಾಂಡ್ನಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದಕ್ಕೆ ವಿರೋಧ
ವ್ಯಕ್ತವಾಗಿತ್ತು. ಈ ಸೌಲಭ್ಯವನ್ನು ರದ್ದುಪಡಿಸದಿದ್ದರೆ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಹಾಕಿದ್ದರು. ಅದಕ್ಕೆ ಮಣಿದು ಒಳಗೊಳಗೇ ತೇಪೆ ಹಚ್ಚಲಾಯಿತು. ಅಂದರೆ ಉಳಿದ ರಾಜ್ಯಗಳು ಏನು ಪಾಪ ಮಾಡಿವೆ?
ನಿರುದ್ಯೋಗಿ ಯುವಕರನ್ನು ಉದ್ಯೋಗಸ್ಥ ಯುವತಿಯರು ಇಷ್ಟಪಡುವುದಿಲ್ಲ. ಈ ಸಮಸ್ಯೆಯ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ನಿರುದ್ಯೋಗಿಗಳು ಕಳ್ಳತನ, ಸರ ಅಪಹರಣ, ಕೊಲೆ–ಸುಲಿಗೆಯಂಥ ಅಡ್ಡದಾರಿ ಮೂಲಕ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಸ್ಥಿತಿ ಒದಗಬಹುದು. ಇಲ್ಲವೇ ಜೈಲಿನ ಊಟಕ್ಕೆ ಕಾಯಬೇಕಾಗುತ್ತದೆ. ನಿರುದ್ಯೋಗಿಗಳು ಯಾರೂ ವೋಟು ಕೂಡ ಹಾಕುವುದಿಲ್ಲ. ಸಮಾನತೆ ಬಯಸುವ ಕಮ್ಯುನಿಸಂಗೆ ಜೈ ಅಂತಾರೆ. ದುಡಿಮೆಯೇ ಅತ್ಯಂತ ಬೆಲೆ ಬಾಳುವ ಬಂಡವಾಳ ಎಂಬುದನ್ನು ಸರ್ಕಾರ ಮನಗಾಣಬೇಕು.
-ಎಸ್. ಗುರುಪ್ರಶಾಂತ್, ನಂದನ್ ಎಂ., ರಾಮಚಂದ್ರ, ಎಂ.ಆರ್. ವೆಂಕಟೇಶಪ್ರಸಾದ್, ಎಸ್. ವೆಂಕಟಪ್ಪ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.