ಕುವೆಂಪು ಅವರು ಕರ್ನಾಟಕವನ್ನು ‘ಸರ್ವ ಜನಾಂಗದಶಾಂತಿಯ ತೋಟ’ ಎಂದಿದ್ದರು. ನಮ್ಮ ರಾಜ್ಯ ಆಗ ಹಾಗೆಯೇ ಇತ್ತು. ಆದರೆ ಈಗ ಒಂದೊಂದು ಜನಾಂಗದವರದೂ ಒಂದೊಂದು ‘ಜಾತಿಯ ತೋಟ’. ಒಂದೊಂದು ಜಾತಿಗೂ ಒಬ್ಬ ಸ್ವಾಮೀಜಿ. ಒಬ್ಬೊಬ್ಬ ಸ್ವಾಮೀಜಿಗೂ ರಾಜಕೀಯ ಪಕ್ಷಗಳೊಂದಿಗೆ, ರಾಜಕಾರಣಿಗಳೊಂದಿಗೆ ಸಂಬಂಧ. ಇದರಿಂದಾಗಿ ಕರ್ನಾಟಕದಲ್ಲೀಗ ‘ಜಾತಿ’ಯೇ ಕುಣಿದಾಡುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಜಾತಿ, ಮಂತ್ರಿಯಾಗಲು ಜಾತಿ, ಪಕ್ಷದ ಮುಖಂಡನಾಗಲು ಜಾತಿ, ಅಷ್ಟೇ ಅಲ್ಲ ಮುಖ್ಯಮಂತ್ರಿಯಾಗಲು ಸಹ ಜಾತಿ ಲೆಕ್ಕಾಚಾರ.
ಬಿಜೆಪಿಯವರು ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುತ್ತಾರೆ. ಜೆಡಿಎಸ್ ಜಾತ್ಯತೀತ ಎಂಬ ಹಣೆಪಟ್ಟಿ ಅಂಟಿಸಿಕೊಂಡೂ ಮುಸ್ಲಿಂ, ಒಕ್ಕಲಿಗ ಹೀಗೆ ಪ್ರತ್ಯೇಕ ಸಮುದಾಯಗಳ ಸಮಾವೇಶ ನಡೆಸುತ್ತದೆ. ಕಾಂಗ್ರೆಸ್ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ರಾಜಕೀಯ ಪಕ್ಷಗಳು ಜಾತಿಗೊಂದರಂತೆ ಸಮಾವೇಶಗಳನ್ನು ನಡೆಸಿ ಯಾವ ಯಾವ ಜಾತಿಯ ಬೆಂಬಲ ತನಗಿದೆ ಎಂದು ಬಲಪ್ರದರ್ಶನಕ್ಕೆ ಹೊರಟರೆ, ಮುಂದೊಮ್ಮೆ ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟು, ರಾಜಕೀಯ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಇದೆ. ಜನರು ಈಗಲೇ ಎಚ್ಚೆತ್ತುಕೊಂಡು ಜಾತಿವಾದಿ ರಾಜಕಾರಣಿಗಳನ್ನು ತಿರಸ್ಕರಿಸದಿದ್ದರೆ ಮುಂದೆ ದುರ್ದಿನಗಳನ್ನು ನೋಡಬೇಕಾದೀತು.
ಮ.ಸೊ. ಹಾಲಸ್ವಾಮಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.