ADVERTISEMENT

ಸರ್ಕಾರಿ ಶಾಲೆ ಸಂಸ್ಕೃತಿಯ ಅಸ್ತಿತ್ವದ ಪ್ರತೀಕ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:30 IST
Last Updated 6 ನವೆಂಬರ್ 2020, 19:30 IST

ಶತಮಾನ ದಾಟಿದ ಶಾಲೆಗಳ ಬಗೆಗೆ ಜಿ.ಎಸ್‌.ಜಯದೇವ ಹಾಗೂ ಕೃಷ್ಣಮೂರ್ತಿ ಹನೂರು ಅವರು ಬರೆದ ಲೇಖನ (ಪ್ರ.ವಾ., ನ. 2) ಸಮಯೋಚಿತವಾಗಿತ್ತು. ರಾಜ್ಯೋತ್ಸವದ ಈ ತಿಂಗಳಿನಲ್ಲಿ ಈ ಬಗ್ಗೆ ಲೇಖನ ಬಂದಿರುವುದು ಸ್ವಾಗತಾರ್ಹ. ಸರ್ಕಾರಿ ಶಾಲೆಗಳನ್ನು ಸಶಕ್ತಗೊಳಿಸಬೇಕೆಂದರೆ ಮೊದಲು ಅಲ್ಲಿ ದಾಖಲಾತಿ ಹೆಚ್ಚಿಸಬೇಕು. ಇದಕ್ಕೆ ಸುಲಭದ ಉಪಾಯವೆಂದರೆ, ಸರ್ಕಾರಿ ನೌಕರರೆಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವಂತಾಗ ಬೇಕು. ಸರ್ಕಾರಿ ಸೌಲಭ್ಯ ಪಡೆಯುವವರಿಗೆ ಸರ್ಕಾರಿ ಶಾಲೆ ಯಾಕೆ ಬೇಡ? ಒಬ್ಬ ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲ ಸಿಬ್ಬಂದಿಯೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಿದರೆ ಶಾಲೆಗಳ ಗುಣಮಟ್ಟ ಸಹಜವಾಗಿಯೇ ಹೆಚ್ಚಾಗುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಬಿಪಿಎಲ್‌ ಕಾರ್ಡ್ ಬೇಕು ಎನ್ನುವ ಜನ ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗೆ ಸೇರಿಸುವುದಾದರೂ ಹೇಗೆ? ಇಂತಹ ಸಂಗತಿಗಳ ಕಡೆ ಗಮನ ಹರಿಸಬೇಕು. ಸರ್ಕಾರಿ ಶಾಲೆಗಳು ಬರೀ ಶಾಲೆಗಳಾಗಿರದೆ ನಮ್ಮ ಮಣ್ಣಿನ ಅಸ್ತಿತ್ವದ ಪ್ರತೀಕಗಳಾಗಿವೆ. ಸರ್ಕಾರಿ ಶಾಲೆಯಲ್ಲಿ ಇರುವ ಸಮರ್ಪಣಾ ಮನೋಭಾವದ ಶಿಕ್ಷಕರ ಅಗಾಧ ಜ್ಞಾನವನ್ನು ಸಕರಾತ್ಮಕವಾಗಿ ಬಳಸಿಕೊಳ್ಳಬೇಕಾಗಿದೆ. ಆದರೆ ದುರ್ದೈವದ ಸಂಗತಿಯೆಂದರೆ,ನೈತಿಕತೆಯ ಪಾಠ ಹೇಳಬೇಕಾದ ಶಿಕ್ಷಕರೇ ಇಂದು ಜಾತಿ, ರಾಜಕಾರಣ ಎಂದೆಲ್ಲ ಹೊರಟರೆ ಭವಿಷ್ಯದ ಗತಿ ಕಠಿಣವಾಗುತ್ತದೆ. ಸರ್ಕಾರಿ ಶಾಲೆಗಳು ನಮ್ಮ ಸಂಸ್ಕೃತಿಯ ಅಸ್ತಿತ್ವ, ಅವುಗಳನ್ನು ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ.

- ಮಂಜುನಾಥ ಬ್ಯಾಳಿ,ಕೋಟುಮಚಗಿ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT