ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಕೊಡಬೇಕೆಂದು ಉದ್ಯೋಗ ಖಾತರಿ ಕಾನೂನು ಹೇಳುತ್ತದಷ್ಟೇ. ಹಲವಾರು ಜಿಲ್ಲೆಗಳಲ್ಲಿ ಗ್ರಾಮೀಣ ಕೂಲಿಕಾರರು ಸಂಘಟನೆಯಾಗಿ ಕೆಲಸವನ್ನು ಕೇಳಿ ಪಡೆಯುತ್ತಿದ್ದಾರೆ. ಎಲ್ಲೆಲ್ಲಿ ಜನರು ಸಂಘಟಿತರಾಗಿ ಕೆಲಸ ಪಡೆಯುತ್ತಿದ್ದಾರೋ ಅಲ್ಲೆಲ್ಲ ಹೆಚ್ಚಾಗಿ ಕೆರೆ ಹೂಳೆತ್ತುವ ಕೆಲಸವನ್ನೇ ಕೊಟ್ಟು ಅನೇಕ ಕೆರೆಗಳು ಇಂದು ಜಲಪಾತ್ರೆಗಳಾಗಿರುವುದು ಕಣ್ಣಿಗೆ ಕಾಣುತ್ತಿದೆ.
ಕಾನೂನಿನಲ್ಲಿ ಹೇಳಿರುವ ಕಾಮಗಾರಿಗಳಲ್ಲಿ ನಡೆಪ್ ಮಾದರಿಯ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮತ್ತು ಜೀವಾಮೃತ ತಯಾರಿಕೆ ಕೂಡ ಒಂದು. ‘ಊರ ತುಂಬ ಬೆಳೆದಿರುವ ಕಸವನ್ನು ನಡೆಪ್ ಮಾದರಿಯಲ್ಲಿ ಗೊಬ್ಬರ ತಯಾರಿಸುತ್ತೇವೆ, ಕೆಲಸ ಕೊಡಿ’ ಎಂದು ಕೂಲಿಕಾರರು ಕೇಳುತ್ತಿದ್ದಾರೆ. ಆದರೆ ಆಡಳಿತ ಯಂತ್ರ ಮನಸ್ಸು ಮಾಡುತ್ತಿಲ್ಲ. ಅದರ ಅಳತೆ ಏನಾಗಬೇಕು, ಎಷ್ಟು ಸಂಪನ್ಮೂಲ ಸೃಷ್ಟಿಯಾಗುತ್ತದೆ ಎಂಬೆಲ್ಲ ಗೊಂದಲಗಳು ಆಡಳಿತಕ್ಕೆ ಇರುವಂತಿದೆ. ಕಾನೂನಿನಲ್ಲಿ ಈ ವಿಷಯ ಹಾಕುವಾಗ ಲೆಕ್ಕ ಹಾಕಿ,
ವಿಚಾರ ಮಾಡಿಯೇ ಹಾಕಲಾಗುತ್ತದೆಯಲ್ಲವೇ? ಹಾಗಿದ್ದೂ ಪರಿಸರಕ್ಕೆ ಪೂರಕವಾದ, ಸ್ವಚ್ಛ ಭಾರತ ಯೋಜನೆಗೆ ನೆರವಾಗಬಲ್ಲ, ಪ್ರತಿವರ್ಷವೂ ಕೆಲಸ ಕೊಡಬಲ್ಲ ಈ ಕಾಮಗಾರಿಗೆ ಹಿಂಜರಿಕೆ ಏಕೆ? ಪಂಚಾಯತ್ ರಾಜ್ ಇಲಾಖೆ ಈ ಕುರಿತು ಚರ್ಚೆ ಮಾಡಬೇಕು ಮತ್ತು ಎಲ್ಲೆಲ್ಲಿ ಹಸಿರು ಕಳೆಗಳಿವೆಯೋ ಅಲ್ಲೆಲ್ಲ ಕಾಂಪೋಸ್ಟ್ ತಯಾರಿಕೆಯ ಕೆಲಸ ಕೊಡುವಂತೆ ಆದೇಶ ಹೊರಡಿಸಬೇಕು.
–ಶಾರದಾ ಗೋಪಾಲ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.