ಹಳ್ಳಿಗರ ಸಮಸ್ಯೆಗಳಿಗೆ ಮನೆ ಬಾಗಿಲಲ್ಲೇ ಪರಿಹಾರ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಯೋಜನೆ ಒಂದಷ್ಟು ಭರವಸೆ ಮೂಡಿಸಿದೆ. ಈ ವಿಶಿಷ್ಟ ಚಿಂತನೆಗೆ ಅಭಿನಂದನೆ ಸಲ್ಲಬೇಕು. ಜಿಲ್ಲಾಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ, ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಪಿಂಚಣಿ, ಆಶ್ರಯ ಯೋಜನೆ, ಪಹಣಿ, ಸ್ಮಶಾನ, ಮತದಾರರ ಪಟ್ಟಿ ಪರಿಷ್ಕರಣೆ, ಬಿಪಿಎಲ್ ಕಾರ್ಡ್ ವ್ಯವಸ್ಥೆ, ಪೋಡಿ ಮೊದಲಾದವುಗಳಿಗೆ ಸಂಬಂಧಿಸಿದಂತೆ ಅನೇಕ ಎಡರುತೊಡರುಗಳು ಇರುತ್ತವೆ. ಅವುಗಳಿಗೆ ಸ್ಥಳದಲ್ಲೇ ಪರಿಹಾರ ದೊರೆತರೆ ಫಲಾನುಭವಿಗಳಿಗೆ ಅಷ್ಟರಮಟ್ಟಿಗೆ ನೆಮ್ಮದಿ.
ವಿವಿಧ ಯೋಜನೆಗಳಿಗೆ ಬೇಕಾದ ದಾಖಲೆ ಪಡೆಯಲು ಹಾಗೂ ಇತರ ಸರ್ಕಾರಿ ಕೆಲಸಗಳಿಗಾಗಿ ಮಧ್ಯವರ್ತಿಗಳ ಮೂಲಕ ಹಣ ಕೊಟ್ಟು ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಸರ್ಕಾರವು ಈ ವಾಸ್ತವ ಸ್ಥಿತಿಯನ್ನು ಅರಿತು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಿರುವುದು ಸಮಾಧಾನಕರ. ಇದರಿಂದ ಹಳ್ಳಿಗಾಡಿನ ಜನರು ತಮ್ಮ ಕೆಲಸಗಳಿಗಾಗಿ ಊರಿಂದ ಊರಿಗೆ ಅಲೆಯುವ ಪ್ರಮೇಯ ತಪ್ಪಬಹುದು.
ಅನಿಲ್ ಕುಮಾರ್,ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.