ADVERTISEMENT

ರಾಜಕೀಯ ಧ್ರುವೀಕರಣ ಪ್ರೇರಿತ ಆಂದೋಲನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಎಲ್.ಕೆ.ಅಡ್ವಾಣಿ ಅವರಿಂದ ಶಿಲಾನ್ಯಾಸ ನೆರವೇರಬೇಕು ಎಂದು ರಮಾನಂದ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜುಲೈ 23). ರಾಮಾಯಣ ಎಂಬುದು ಕಾವ್ಯ (ಕಥೆ, ಕಲ್ಪನೆ) ಎಂಬುದನ್ನು ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದರೂ ಜನರ ನಂಬಿಕೆ ಆಧರಿಸಿ ಮಂದಿರ ನಿರ್ಮಾಣದ ತೀರ್ಪು ನೀಡಿದೆ. ಆದರೆ ಅದೇ ಸಮಯದಲ್ಲಿ, ಮಸೀದಿ ಧ್ವಂಸ ಪ್ರಕರಣವನ್ನು ಕೈಬಿಡದೆ ಮುಂದುವರಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದೂ ಹೇಳಿದೆ. ಆ ಪ್ರಕರಣದ ಅತಿಮುಖ್ಯ ಆರೋಪಿಗಳಲ್ಲಿ ಅಡ್ವಾಣಿ‌ ಕೂಡ ಒಬ್ಬರು.

ಮಂದಿರ ನಿರ್ಮಾಣ ಆಂದೋಲನವು ರಾಜಕೀಯ ಧ್ರುವೀಕರಣ ಪ್ರೇರಿತವೇ ವಿನಾ ಯಾವುದೇ ಉದಾರ ಆಲೋಚನೆಯನ್ನಾಗಲೀ ಬಡ ಭಾರತೀಯನ ಕಷ್ಟ ಪರಿಹಾರದ ಕನಸನ್ನಾಗಲೀ ಹೊಂದಿದ್ದುದೇನಲ್ಲ. ಹೀಗಿರುವಾಗ, ಮಸೀದಿ ಧ್ವಂಸಗೊಳಿಸಿದ ಆರೋಪ ಹೊತ್ತ ವ್ಯಕ್ತಿಯೇ ಅದೇ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವುದರಿಂದ ಭಾರತೀಯ ನ್ಯಾಯ ವ್ಯವಸ್ಥೆಯನ್ನು ಅವಹೇಳನ ಮಾಡಿದಂತೆ ಆಗುತ್ತದಷ್ಟೆ. ಅದೂ ಅಲ್ಲದೆ ಧರ್ಮನಿರಪೇಕ್ಷತೆಯನ್ನು ಸಂವಿಧಾನದ ಅಡಿಪಾಯಗಳಲ್ಲಿ ಒಂದೆಂದು ಭಾವಿಸಿರುವ ದೇಶದ ಸಂಹಿತೆಗೆ, ಸರ್ಕಾರವೇ ಮುಂದೆ ನಿಂತು ನಿರ್ದಿಷ್ಟ ಧರ್ಮದ ಆಲಯವನ್ನು ನಿರ್ಮಿಸುವುದೂ ಅಪೇಕ್ಷಣೀಯವಲ್ಲ. ಸುಪ್ರೀಂ ಕೋರ್ಟ್‌ ತೀರ್ಪನ್ನು ಪಾಲಿಸುವ ಕರ್ತವ್ಯದ ಭಾಗವಾಗಿ ಮಾತ್ರ ಸರ್ಕಾರ ಈ ಕ್ರಿಯೆಯನ್ನು ನಡೆಸಬೇಕು.

- ರೋಹಿತ್ ಅಗಸರಹಳ್ಳಿ,ಹಾಸನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.