‘ಚುನಾವಣೆಯ ಹೊತ್ತಿಗಷ್ಟೇ ರಾಜಕೀಯ ಸೀಮಿತವಾಗಿರಬೇಕು, ಆ ಬಳಿಕ ಏನಿದ್ದರೂ ಅಭಿವೃದ್ಧಿಯ ಆಶಯವನ್ನು ಸಾಕಾರಗೊಳಿಸಲು ಸಮನ್ವಯದಿಂದ ಒಗ್ಗಟ್ಟಾಗಿ ದುಡಿಯುವುದೇ ಎಲ್ಲ ಜನಪ್ರತಿನಿಧಿಗಳ ಮುಖ್ಯ ಧ್ಯೇಯವಾಗಿರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಕರೆ ಕೊಟ್ಟಿದ್ದಾರೆ. ಇದೊಂದು ಶ್ಲಾಘನೀಯ ನಡೆ.
ಮುಖ್ಯಮಂತ್ರಿಗಳಾದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣದ ಚಂದ್ರಶೇಖರ ರಾವ್ ಅವರು ಸಭೆಗೆ ಗೈರುಹಾಜರಾಗುವ ಮೂಲಕ ಮೊಂಡುತನವನ್ನು ಮುಂದುವರಿಸಿದ್ದಾರೆ. ವಿವಿಧ ಭೌಗೋಳಿಕ ಪರಿಸ್ಥಿತಿ, ಭಿನ್ನ ಸಂಸ್ಕೃತಿಯನ್ನು ಒಳಗೊಂಡಿರುವ ಭಾರತ ಎದುರಿಸುತ್ತಿರುವ ಸಮಸ್ಯೆಗಳೂ ಅಷ್ಟೇ ಭಿನ್ನವಾಗಿವೆ. ಬಡತನ, ನಿರುದ್ಯೋಗ, ಬರ, ಪ್ರವಾಹ, ಮಾಲಿನ್ಯ, ಭ್ರಷ್ಟಾಚಾರ, ಹಿಂಸಾಚಾರದಂತಹ ಸಂಗತಿಗಳ ವಿರುದ್ಧ ಸಂಘಟಿತವಾಗಿ ಹೋರಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ತುಂಬಾ ಮುಖ್ಯ. ಹಾಗೆಯೇ ರಾಜ್ಯ ಸರ್ಕಾರಗಳು ಕೂಡ ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ, ನೀತಿ ಆಯೋಗದ ಸಭೆ ಮತ್ತು ಅಲ್ಲಿ ಮಾಡಿರುವ ಸಂಕಲ್ಪಗಳು ಮಹತ್ವ ಪಡೆದುಕೊಂಡಿವೆ.
–ಮಣಿಕಂಠ ಪಾ. ಹಿರೇಮಠ,ಚವಡಾಪೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.