ಕೆಮ್ಮು, ಜ್ವರ, ಶೀತ, ಗಂಟಲು ಕೆರೆತ, ಕಫ, ಮೈಕೈ ನೋವು ಮನುಷ್ಯರಿಗೆ ಆಗಾಗ ಉಂಟಾಗುವ ಸಾಮಾನ್ಯ ತೊಂದರೆಗಳು. ಇವು ಕೆಲವರಿಗೆ ಮನೆಯ ಮದ್ದಿನಲ್ಲೇ ವಾಸಿಯಾದರೆ, ಇನ್ನು ಕೆಲವರಿಗೆ ಆಸ್ಪತ್ರೆಯ ಮೆಟ್ಟಿಲು ಹತ್ತಿದರೆ ಮಾತ್ರ ಹೋಗುತ್ತವೆ. ಅಂತಹವರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದರೆ ಕೆಲವೆಡೆ ಅವರಿಗೆ ತಕ್ಷಣ ಯಾವುದೇ ಚಿಕಿತ್ಸೆ ನೀಡದೆ ಅಸ್ಪೃಶ್ಯರಂತೆ ನೋಡಲಾಗುತ್ತಿದೆ.
ಆ ಪರೀಕ್ಷೆ ಈ ಪರೀಕ್ಷೆ ಎಂದು ಗಂಟಲು ದ್ರವ, ಮೂತ್ರ, ರಕ್ತದ ಮಾದರಿ ತೆಗೆದುಕೊಂಡು ಹೋಗುವವರು ಗಂಟೆಗಟ್ಟಲೆ ಹಿಂದಿರುಗುವುದಿಲ್ಲ. ವರದಿ ಬರುವುದು ಯಾವಾಗ ಎಂದು ಸರಿಯಾಗಿ ತಿಳಿಸುವುದಿಲ್ಲ. ರೋಗಿಯನ್ನು ಕರೆದುಕೊಂಡು ಬಂದವರನ್ನು ಅವರ ಹತ್ತಿರ ಇರಲು ಸಹ ಬಿಡುವುದಿಲ್ಲ. ಇತ್ತ ರೋಗಿಗೆ ಜ್ವರ ಏರುತ್ತಿದ್ದರೂ ಬೇರೆ ಯಾವುದೇ ಔಷಧ ನೀಡುವುದಿಲ್ಲ. ಅಂತೂ ಇಂತೂ ವರದಿ ಬರುವವರೆಗೆ ಸಾಧಾರಣ ರೋಗಿಯು ಮಹಾರೋಗಿಯಾಗಿ ಹೈರಾಣಾಗಬೇಕಾಗುತ್ತದೆ.
ವೈದ್ಯರು ಚಿಕಿತ್ಸೆ ನೀಡಲು ವರದಿ ಬರುವವರೆಗೆ ಕಾಯದೆ, ರೋಗಲಕ್ಷಣಕ್ಕೆ ತಕ್ಕಂತೆ ಕೂಡಲೇ ಔಷಧ ನೀಡಬೇಕು. ಕೊರೊನಾದ ಭಯದಿಂದ ಎಲ್ಲರನ್ನೂ ಒಂದೇ ಕೊಳಗದಲ್ಲಿ ಅಳೆದು, ಚಿಕಿತ್ಸೆ ನೀಡಲು ಸತಾಯಿಸಿ ರೋಗಿಯ ಅನಾರೋಗ್ಯ ಹೆಚ್ಚಾಗುವುದಕ್ಕೆ ಆಸ್ಪದ ನೀಡುವುದು ಸರಿಯಲ್ಲ.
ಗಣಪತಿ ನಾಯ್ಕ, ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.